ಮಂಗಳೂರು: ವ್ಯಕ್ತಿಯೊಬ್ಬ ನಾಯಿ – ಬೆಕ್ಕುಗಳಿಗೆ ವಿಷಪ್ರಾಶನ ಮಾಡಿ ಸಾಯಿಸುತ್ತಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವೆಲೆನ್ಸಿಯಾ ನಿವಾಸಿ ಮೆಲ್ವಿನ್ ಪಿಂಟೋ ಎಂಬುವವರು ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಈ ಕೃತ್ಯವನ್ನು ವೆಲೆನ್ಸಿಯಾ ನಿವಾಸಿ ಮನೋಹರ್ ಪಾಯ್ಸ್ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಈ ವ್ಯಕ್ತಿಯು ದೂರುದಾರರ ನೆರೆಮನೆಯನು ಎಂದು ತಿಳಿಸಲಾಗಿದೆ.
ಮನೋಹರ್ ಪಾಯ್ಸ್ ಕಳೆದ 3- 4 ವರ್ಷಗಳಿಂದ ನಾಯಿ – ಬೆಕ್ಕುಗಳಿಗೆ ವಿಷ ಹಾಕಿ ಕೊಲ್ಲುವುದರಲ್ಲಿ ನಿರತನಾಗಿದ್ದಾನೆ. ಈತನಿಂದ ಪ್ರಾಣಿ ಮತ್ತು ಮನುಷ್ಯರಿಗೆ ಸಮಸ್ಯೆಯಾಗಿದೆ. ವಾರದ ಹಿಂದೆಯೂ ನಾಯಿ – ಬೆಕ್ಕುಗಳನ್ನು ವಿಷ ನೀಡಿ ಕೊಂದಿದ್ದಾನೆ. ಇದೇ ರೀತಿ ನನ್ನ ನಾಯಿಯೂ ವಿಷ ಸೇವಿಸಿ ಪ್ರಾಣ ಬಿಟ್ಟಿದೆ. ಹೀಗಾಗಿ ಈತನ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಮೆಲ್ವಿನ್ ಪಿಂಟೋ ಎಂಬುವವರು ದೂರು ನೀಡಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.