ಬೆಳ್ತಂಗಡಿ: ಪತ್ನಿ ಆತ್ಮಹತ್ಯೆ ಮಾಡಿಕೊಂಡು ಆಕೆಯ ಅಂತ್ಯಸಂಸ್ಕಾರಕ್ಕೆಂದು ಕಟ್ಟಿದ್ದ ಶಾಮಿಯಾನದ ಪೈಪಿಗೆ ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಚ್ಚಿನ ಗ್ರಾಮದ ಮುಡಿಪಿರೆಯಲ್ಲಿ ನಡೆದಿದೆ. ಪತ್ನಿ ಚಂದ್ರಾವತಿ (49.ವ) ಮನೆಯ ಪಕ್ಕದ ಗೇರುಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮರುದಿನ ಪತಿ ಶಿವಪ್ಪ ಗೌಡ(56ವ.) ಕೂಡ ಅದೇ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಂದ್ರಾವತಿ ಮನೆಯ ಜಾನುವಾರಿಗೆ ಹುಲ್ಲು ತರಲೆಂದು ಮನೆಯಿಂದ ಮಧ್ಯಾಹ್ನ ಹೊರಹೋದವರು ಸಂಜೆಯವರೆಗೂ ಮರಳಿಬಾರದೇ ಇದ್ದುದರಿಂದ ಸಂದೇಹಗೊಂಡ ಮನೆಯವರು ಹುಡುಕಾಟ ನಡೆಸಿದ ಸಂದರ್ಭ ಅವರು ಆತ್ಮಹತ್ಯೆ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿತ್ತು.
ಪತಿಗೆ ತೀವ್ರ ಕುಡಿತದ ಚಟ, ವಾಸಿಯಾಗದ ದೀರ್ಘ ಕಾಲದ ಅಸೌಖ್ಯ ಮತ್ತು ಮಕ್ಕಳಾಗದೇ ಇರುವ ಬಗ್ಗೆ ಮಾನಸಿಕವಾಗಿ ನೊಂದಿದ್ದ ಅವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆಯ ದಾರಿ ಹಿಡಿದಿದ್ದರು.
ಚಂದ್ರಾವತಿಯವರ ಅಂತ್ಯಸಂಸ್ಕಾರ ಶನಿವಾರ ನಡೆದಿದ್ದು, ಜೋರಾಗಿ ಮಳೆ ಇದ್ದುದರಿಂದ ಜಾಗಕ್ಕೆ ಶಾಮಿಯಾನ ಹಾಕಲಾಗಿತ್ತು. ರಾತ್ರಿ 10 ಗಂಟೆಯಿಂದ ರವಿವಾರ ಬೆಳಿಗ್ಗೆ 6 ಗಂಟೆಯ ಮಧ್ಯದಲ್ಲಿ ಚಂದ್ರಾವತಿ ಅವರ ಪತಿ ಶಿವಪ್ಪ ಗೌಡ ಅವರು ಇದೇ ಚಪ್ಪರದ ಕಂಬಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ದಂಪತಿಯು ಮುಡಿಪಿರೆ ಎಂಬಲ್ಲಿ ತಾಯಿ ನಾಗಮ್ಮರೊಂದಿಗೆ ವಾಸ್ತವ್ಯವಿದ್ದರು. ಇದೀಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದು, ಸದ್ಯಕ್ಕೆ ತಾಯಿ ಒಬ್ಬಂಟಿಯಾಗಿದ್ದಾರೆ. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾನೂನಿನ ಪ್ರಕ್ರೀಯೆ ನಡೆದಿದೆ.