ಕಡಬ: ಪೇಟೆಯಲ್ಲಿ ರಸ್ತೆಗೆ ಬಾಗಿರುವ ಬೃಹತ್ ಮರವೊಂದರ ರೆಂಬೆಗಳು ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಸಾಧ್ಯತೆಗಳಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ.
ಪೇಟೆಯ ದೈವಗಳ ಮಾಡದ ಬಳಿ ಇರುವ ಬಸ್ ತಂಗುದಾಣದ ಎದುರು ರಸ್ತೆಯ ಬದಿಯಲ್ಲಿರುವ ಈ ಮರದ ಉದ್ದನೆಯ ರೆಂಬೆಗಳು ರಸ್ತೆಯತ್ತ ಚಾಚಿ ಕೊಂಡಿದ್ದು, ಅದರ ಕೆಳಗೆ ವಿದ್ಯುತ್ ಲೈನ್ ಕೂಡ ಹಾದುಹೋಗುತ್ತಿದೆ. ಉಪ್ಪಿನಂಗಡಿ -ಕಡಬದ ಮೂಲಕ ಸುಬ್ರಹ್ಮ ಣ್ಯದತ್ತ ತೆರಳುವ ಸರಕಾರಿ ಬಸ್ ಗಳು ಪ್ರಯಾಣಿಕರನ್ನು ಇಳಿಸಲು ಮತ್ತು ಹತ್ತಿಸಿಕೊಳ್ಳಲು ಇದೇ ಮರದಡಿಯಲ್ಲಿ ನಿಲ್ಲುತ್ತಿವೆ. ಮರದ ಕೆಳಗೆ ಗೂಡಂಗಡಿಗಳು ಕೂಡ ಇದ್ದು, ಸದಾ ಇಲ್ಲಿ ಜನರು ಓಡಾಡುತ್ತಿರುತ್ತಾರೆ. ಮರ ಅಥವಾ ಅದರ ರೆಂಬೆಗಳು ಮುರಿದುಬಿದ್ದರೆ ಅಪಾಯ ಖಂಡಿತ ಎನ್ನುವ ಪರಿಸ್ಥಿತಿ ಇಲ್ಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಡಬ ಮೆಸ್ಕಾಂ ಎಇಇ ಸಜಿಕುಮಾರ್, ಪ.ಪಂ. ವತಿಯಿಂದ ಮರದ ರೆಂಬೆಗಳನ್ನು ತೆರವುಗೊಳಿಸುವುದಾದರೆ ಆ ಸಂದರ್ಭದಲ್ಲಿ ಮರದ ಕೆಳ ಭಾಗದಿಂದ ಹಾದು ಹೋಗಿರುವ ವಿದ್ಯುತ್ ತಂತಿಯನ್ನು ತೆಗೆದುಕೊಡುವುದಾಗಿ ತಿಳಿಸಿದ್ದಾರೆ.