ಬಂಟ್ವಾಳ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಲ್ಲಡ್ಕದ ರಸ್ತೆಯ ಅವಸ್ಥೆಯ ಚಿತ್ರಣ ಇಲ್ಲಿದೆ ನೋಡಿ.. ರಾಷ್ಟ್ರೀಯ ಹೆದ್ದಾರಿ ಮಂಗಳೂರು – ಬೆಂಗಳೂರು ಮಧ್ಯೆ ಕಲ್ಲಡ್ಕದ ರಸ್ತೆಯನ್ನು ನೋಡಿದರೆ ರಸ್ತೆಯಲ್ಲಿ ಸಂಚಾರ ಮಾಡಲು ಹೆದರಿಕೆ ಆಗುತ್ತದೆ.
ಕಲ್ಲಡ್ಕದಲ್ಲಿ ಫೈ ಓವರ್ ಕಾಮಗಾರಿ ನಡೆಯುತ್ತಿದ್ದು ಹಳೆಯ ರಸ್ತೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಪ್ರತ್ಯೇಕ ಡಾಂಬರು ರಸ್ತೆ ನಿರ್ಮಾಣ ಮಾಡಿ ಆ ಮೂಲಕ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಬದಲಿ ರಸ್ತೆ ಸಂಪೂರ್ಣ ಕಳಪೆಮಟ್ಟದ್ದಾಗಿದ್ದು, ಪ್ರಸ್ತುತ ರಸ್ತೆಯೇ ಇಲ್ಲದಂತಾಗಿದೆ. ರಸ್ತೆ ಹಾಗೂ ಇಡೀ ಕಲ್ಲಡ್ಕ ಪೇಟೆಯಲ್ಲಿ ನೀರು ನಿಂತಿದ್ದು, ಕಲ್ಲಡ್ಕ ಪೇಟೆ ಸಣ್ಣ ತೋಡಿನಂತಾಗಿದೆ.
ಬಿಸಿ ರೋಡು – ಅಡ್ಡಹೊಳೆವರೆಗೆ ಚತುಷ್ಪತ ಹೆದ್ದಾರಿ ಕಾಮಗಾರಿ ಬೇಸಿಗೆ ಕಾಲದಲ್ಲಿ ಆರಂಭವಾಗಿದ್ದು, ಬೇಸಿಗೆ ಕಾಲದಲ್ಲಿ ಧೂಳಿನ ಸಮಸ್ಯೆಯಾದರೆ ಮಳೆಗಾಲದಲ್ಲಿ ಹೊಂಡಗುಂಡಿ, ರಸ್ತೆ ತುಂಬಾ ನೀರು, ಚರಂಡಿ ಅವ್ಯವಸ್ಥೆ ಗುಡ್ಡಗಳು ಜರಿದು ರಸ್ತೆ ತಡೆ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಮಸ್ಯೆಗಳ ಪಟ್ಟಿಯ ಸಾಲು ಮುಂದೆ ಹೋಗಬಹುದು.
ಕಾಮಗಾರಿ ವಹಿಸಿಕೊಂಡ ಕಂಪೆನಿ ಬದಲಿ ರಸ್ತೆ ನಿರ್ಮಾಣ ಮಾಡಿದ ಬಳಿಕ ಹಳೆಯ ರಸ್ತೆಯನ್ನು ಕೆಡುವುವ ಕೆಲಸ ಮಾಡಬೇಕಿತ್ತು. ಪ್ರಸ್ತುತ ರಸ್ತೆಯೆಲ್ಲಿ ಎಂದು ಕೇಳಬೇಕಾದ ಪರಿಸ್ಥಿತಿ ನಿರ್ಮಾವಾಗಿದೆ.
ಗದ್ದೆಗಿಂತಲೂ ಕೆಳಮಟ್ಟದಲ್ಲಿ ಕೆಸರು ಮಿಶ್ರಿತ ಜಲ್ಲಿ ಕಲ್ಲು ಹಾಗೂ ಮಣ್ಣಿನ ರಸ್ತೆಯಲ್ಲಿ ಹೋಗುವುದು ಜೀವ ಭಯದಲ್ಲಿ. ಕೆ.ಎನ್.ಆರ್.ಸಿ.ಖಾಸಗಿ ಸಂಸ್ಥೆ ಈ ಕಾಮಗಾರಿಯ ಗುತ್ತಿಗೆ ವಹಿಸಿ ಕೊಂಡಿದ್ದು, ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದೆ.ಆದರೆ ಮಳೆಗಾಲದಲ್ಲಿ ರಸ್ತೆಯ ನೀರು ಹರಿದು ಹೋಗಲು ಸರಿಯಾದ ಚರಂಡಿ ನಿರ್ಮಾಣ ಆಗಿಲ್ಲವಾದ್ದರಿಂದ ರಸ್ತೆಯಲ್ಲಿ ನೀರು ಶೇಖರಣೆಯಾಗಿದೆ.
ಅಗಲೀಕರಣ ಮಾಡಲಾದ ಕೆಲವು ಕಡೆಗಳಲ್ಲಿ ಗುಡ್ಡ ಜರಿದು ಬೀಳುತ್ತಿದೆ. ರಸ್ತೆ ಬದಿಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಅಳವಡಿಸಲಾದ ವಿದ್ಯುತ್ ಕಂಬಗಳು ಕೆಲವು ಕಡೆಗಳಲ್ಲಿ ಬಿದ್ದರೆ ಉಳಿದ ಬಹುತೇಕ ಕಡೆಗಳಲ್ಲಿ ವಾಲಿ ನಿಂತಿದೆ. ವಾಹನ ಸವಾರರು ಯಾವ ಹೊತ್ತಿಗೆ ವಿದ್ಯುತ್ ಕಂಬಗಳು ಬೀಳುತ್ತದೆ, ಅಥವಾ ಗುಡ್ಡ ಜರಿಯುತ್ತದೆ ಎಂಬ ಹೆದರಿಕೆಯಲ್ಲಿ ಸಂಚಾರ ಮಾಡಬೇಕಾದ ಅನಿವಾರ್ಯತೆ ಇಲ್ಲಿದೆ. ಅಭಿವೃದ್ಧಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಜನರ ಸಹಕಾರ ಅಗತ್ಯ…ಆದರೆ ಜನರಿಗೆ ಸಂಚಾರವೇ ಸಾಧ್ಯ ವಿಲ್ಲ ಎಂಬ ಸ್ಥಿತಿಯ ಹಂತಕ್ಕೆ ತಲುಪಿದಾಗ ಜನರ ತಾಳ್ಮೆಯನ್ನು ಕಂಪೆನಿ ಪರೀಕ್ಷೆ ಮಾಡಿದಂತಾಗುತ್ತದೆ.
ಕಂಪೆನಿ ಟೆಂಡರ್ ಪಡೆಯುವ ಸಂದರ್ಭದಲ್ಲಿ ಜನರಿಗೆ ಸಂಚಾರಕ್ಕೆ ತೊಂದರೆಯಾಗದಂತೆ ಬದಲಿ ಉತ್ತಮ ವ್ಯವಸ್ಥೆ ಕಲ್ಪಿಸಿ ಕಾಮಗಾರಿ ನಡೆಸುವ ಬಗ್ಗೆ ಒಪ್ಪಿಗೆ ನೀಡಿ ಕೆಲಸ ವಹಿಸಿಕೊಂಡಿರುತ್ತದೆ.
ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸಬೇಕಾದ ರಾಷ್ಟ್ರೀಯ ಹೆದ್ದಾರಿ ಸ್ಥಿತಿ ಅಧೋಗತಿಗೆ ಇಳಿದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಮಳೆಗಾಲದ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ಅರಿತುಕೊಂಡು ಕಾಮಗಾರಿ ಆರಂಭಿಸಿದ್ದರೆ ಜನರಿಗೆ ಸಮಸ್ಯೆ ಆಗುತ್ತಿರಲಿಲ್ಲ..