ಮಂಗಳೂರು: ಮಂಗಳೂರು ನಗರ ಮತ್ತು ಸುರತ್ಕಲ್ ಭಾಗದ ಕಾಲೇಜು ವಿದ್ಯಾರ್ಥಿಗಳ ಹೆತ್ತವರಿಗೆ ಕಳೆದ ಎರಡು ದಿನಗಳಲ್ಲಿ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಈ ಕುರಿತು ಪ್ರತಿಕ್ರಯಿಸಿ, ‘ಹಲವಾರು ವಿದ್ಯಾರ್ಥಿಗಳ ಹೆತ್ತವರಿಗೆ ಅಪರಿಚಿತರು ಪೊಲೀಸ್ ಅಧಿಕಾರಿಗಳಂತೆ ಬಿಂಬಿಸಿಕೊಂಡು ಜೂ. 11 ಮತ್ತು 12ರಂದು ವಾಟ್ಸ್ಆ್ಯಪ್ ಮೂಲಕ ಕರೆ ಮಾಡಿ ಮಗ/ಮಗಳನ್ನು ಬಂಧಿಸಿದ್ದೇವೆ. ಅವರ ಬಿಡುಗಡೆಗೆ ಕೂಡಲೇ ಹಣ ನೀಡಿ ಎಂದಿದ್ದಾರೆ. ಹೆತ್ತವರು ಆತಂಕಿತರಾಗಿ ಶಾಲೆಗಳಲ್ಲಿ ವಿಚಾರಿಸಿದಾಗ ಅವರ ಮಕ್ಕಳು ಶಾಲೆಯಲ್ಲಿ ಸುರಕ್ಷಿತರಾಗಿರುವುದು ಗೊತ್ತಾಗಿದೆ. ಕರೆ ಬಂದಿರುವ ಸಂಖ್ಯೆಗಳನ್ನು ಪರಿಶೀಲಿಸಿದಾಗ ಪೋಲಂಡ್, ಪಾಕಿಸ್ತಾನ ದೇಶಗಳ ಕೋಡ್ ಸಂಖ್ಯೆಯನ್ನು ಹೊಂದಿರುವುದು ಕಂಡುಬಂದಿದೆ,’ ಎಂದು ತಿಳಿಸಿದ್ದಾರೆ.
ಹಣ ದೋಚಲು ನಕಲಿ ಅಧಿಕಾರಿಗಳು ನಡೆಸಿರುವ ತಂತ್ರವಿದು. ಈ ರೀತಿ ವಾಟ್ಸ್ಆ್ಯಪ್ನಲ್ಲಿ ವಿದೇಶಗಳಿಂದ ಬರುವ ಯಾವುದೇ ಅಪರಿಚಿತ ವ್ಯಕ್ತಿಗಳ ಕರೆಗಳನ್ನು ಸ್ವೀಕರಿಸಬಾರದು. ಒಂದು ವೇಳೆ ಇಂತಹ ಕರೆಗಳನ್ನು ಸ್ವೀಕರಿಸಿದರೆ ಕೂಡಲೇ ಪಕ್ಕದ ಪೊಲೀಸ್ ಠಾಣೆಗೆ ತಿಳಿಸಬೇಕು. ಶಾಲಾ ಕಾಲೇಜುಗಳು ಕೂಡ ಇಂತಹ ನಕಲಿ ಕರೆಗಳ ಕುರಿತು ಹೆತ್ತವರು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.