ಉಪ್ಪಳ: ಉಪ್ಪಳದ ಖಾಸಗಿ ಬ್ಯಾಂಕ್ನ ಎಟಿಎಂಗೆ ಹಣ ತುಂಬಿಸಲೆಂದು ಬಂದ ವಾಹನದಿಂದ ಮಾರ್ಚ್ 27 ರಂದು ಹಾಡುಹಗಲೇ 50 ಲಕ್ಷ ರೂ. ಕಳವು ಮಾಡಿದ್ದು ತಮಿಳುನಾಡಿನ “ತಿರುಟ್’ ತಂಡಕ್ಕೆ ಸೇರಿದವರಾಗಿದ್ದಾರೆಂದು ಪೊಲೀಸರಿಗೆ ಮಾಹಿತಿ ಲಭಿಸಿದೆ ಎಂದು ತಿಳಿದು ಬಂದಿದೆ.
‘ತಿರುಟ್’ ತಂಡದಲ್ಲಿ 30 ಮಂದಿ ಇದ್ದಾರೆನ್ನಲಾಗಿದ್ದು, ಈ ತಂಡ ಕಳವು, ದರೋಡೆ ಮಾತ್ರವಲ್ಲ ಸ್ಪಿರಿಟ್ ಸಾಗಾಟ ದಂದೆಯನ್ನೂ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಈ ಎಲ್ಲಾ ದಂಧೆಯಿಂದ ಐಶಾರಾಮಿ ಜೀವನ ನಡೆಸುವುದು ಇವರ ರೀತಿಯಾಗಿದೆ. ಒಂದೇ ಸ್ಥಳದಲ್ಲಿ ಖಾಯಂ ನಿಲ್ಲದೆ ಅಲೆಮಾರಿಗಳಂತೆ ಅಲೆದಾಡುತ್ತಿದ್ದಾರೆ. ದರೋಡೆಗೆ ಮುನ್ನ ಸ್ಥಳವನ್ನು ಪರಿಚಯ ಮಾಡಿಕೊಂಡು ಸ್ಕೆಚ್ ಹಾಕಿಕೊಳ್ಳುತ್ತಾರೆ. ಈ ತಂಡ ಮಂಗಳೂರಿನಿಂದ ಬಂದು ಕಳವು ಮಾಡಿದ ಬಳಿಕ ಆಟೋ ರಿಕ್ಷಾದಲ್ಲಿ ಕಾಸರಗೋಡು ರೈಲು ನಿಲ್ದಾಣಕ್ಕೆ ಬಂದಿದ್ದರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಕಾಸರಗೋಡಿನಿಂದ ರೈಲಿನಲ್ಲಿ ಎಲ್ಲಿಗೆ ಹೋದರೆಂಬುದು ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗಾಗಿ ಕರ್ನಾಟಕ ಹಾಗು ತಮಿಳುನಾಡು ಪೊಲೀಸರ ನೆರವನ್ನು ಕೇಳಿಕೊಂಡಿದ್ದಾರೆ.