ಬೆಂಗಳೂರು: ವ್ಯವಹಾರದ ಲೆಕ್ಕ ನೀಡಲಿಲ್ಲ ಎಂಬ ಕಾರಣಕ್ಕೆ ಮಗನಿಗೇ ಥಿನ್ನರ್ ಎರಚಿ ಬೆಂಕಿ ಇಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.. ಏಪ್ರಿಲ್ ಒಂದನೇ ತಾರೀಖು ಮಧ್ಯಾಹ್ನ 2.30ಕ್ಕೆ ಚಾಮರಾಜಪೇಟೆ ಠಾಣಾ ವ್ಯಾಪ್ತಿಯ ಅಜಾದ್ ನಗರದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಫ್ಯಾಬ್ರಿಕೇಷನ್ ಬಿಸಿನೆಸ್ ಮಾಡುತ್ತಿದ್ದ ಸುರೇಂದ್ರ(51) ಎಂಬಾತ ತನ್ನ ಮಗ ಅರ್ಪಿತ್(25) ಗೆ ಬೆಂಕಿ ಹಚ್ಚಿದ್ದ.
5 ದಿನಗಳ ಕಾಲ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರ್ಪಿತ್ ಇಂದು ಅಸುನೀಗಿದ್ದಾನೆ. ಫ್ಯಾಬ್ರಿಕೇಷನ್ ಬಿಸಿನೆಸ್ ನ ಜವಾಬ್ದಾರಿಯನ್ನ ಸುರೇಂದ್ರ ತನ್ನ ಮಗ ಅರ್ಪಿತ್ ಗೆ ನೀಡಿದ್ದ. ಇತ್ತೀಚಿನ ವ್ಯವಹಾರದ ಲೆಕ್ಕ ಪತ್ರಗಳನ್ನ ತಂದೆ ನೀಡಿರಲಿಲ್ಲ ಅರ್ಪಿತ್. ಏಪ್ರಿಲ್ 1 ರಂದು ಮಧ್ಯಾಹ್ನ ಸುಮಾರು 1.5 ಕೋಟಿ ಲೆಕ್ಕ ಕೇಳಿದಾಗ ಅಪ್ಪ- ಮಗ ಮಧ್ಯೆ ಶುರುವಾದ ಜಗಳ ತಾರಕಕ್ಕೆ ಏರಿತ್ತು. ಲೆಕ್ಕ ಕೊಟ್ಟರೂ ಸಾಯಿಸ್ತೀಯ ಲೆಕ್ಕ ಕೊಡದಿದ್ದರೂ ಸಾಯಿಸ್ತೀಯಾ ಏನ್ ಬೇಕಾದರೂ ಮಾಡು ಎಂದು ಉಡಾಫೆ ಮಾತನಾಡಿದ್ದಾನೆ ಅರ್ಪಿತ್.
ಇದೇ ವೇಳೆಗೋಡೌನ್ ನಲ್ಲಿ ಇದ್ದ ಥಿನ್ನರ್ ಎರಚಿದಾಗ ಅರ್ಪಿತ್ ಹೊರಗೆ ಬಂದರೂ ಹಿಂದೆ ಬಂದ ಸುರೇಂದ್ರ ಬೆಂಕಿ ಹಚ್ಚಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.. ಚಿಕಿತ್ಸೆ ಪಡೆಯುವ ವೇಳೆ ಅರ್ಪಿತ್ ನೀಡಿದ ಹೇಳಿಕೆ ಹಾಗೂ ಪ್ರತ್ಯಕ್ಷ ದರ್ಶಿಗಳು ನೀಡಿದ ಮಾಹಿತಿ ಮೇರೆಗೆ ಚಾಮರಾಜಪೇಟೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಸುರೇಂದ್ರನನ್ನ ಬಂಧಿಸಿದ್ದು, ತಾನೇ ಬೆಂಕಿ ಹಚ್ಚಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.