ಪುತ್ತೂರು: ವ್ಯಕ್ತಿಯೊಬ್ಬರು ರೈಲ್ವೇ ಹಳಿ ದಾಟುತ್ತಿರುವುದನ್ನು ಗಮನಿಸಿದ ರೈಲ್ವೇ ಪೈಲೆಟ್ ತಕ್ಷಣ ರೈಲಿನ ವೇಗ ಕಡಿಮೆ ಮಾಡಿ ವ್ಯಕ್ತಿಯ ಪ್ರಾಣ ಉಳಿಸಿದ ಘಟನೆ ರೈಲು ನರಿಮೊಗರು ಮತ್ತು ಎಡಮಂಗಲ ಸೆ.5 ರ ಸಂಜೆ ನಡೆದಿದೆ. ತೀವ್ರ ಗಾಯಗೊಂಡ ವ್ಯಕ್ತಿಯನ್ನು ಅದೇ ರೈಲಿನಲ್ಲಿ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ತಂದು ಬಳಿಕ ಆ್ಯಂಬುಲೆನ್ಸ್ ನಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನಿಂದ ಪುತ್ತೂರು ರೈಲ್ವೇ ನಿಲ್ದಾಣವಾಗಿ ಕಾರವಾರಕ್ಕೆ ಬರುತ್ತಿದ್ದ ಪ್ರಯಾಣಿಕ ರೈಲು ನರಿಮೊಗರು ಮತ್ತು ಎಡಮಂಗಲ ಮಧ್ಯೆ ಬರುತ್ತಿದ್ದಂತೆ ಸುಮಾರು 45 ವರ್ಷದ ವ್ಯಕ್ತಿಯೊಬ್ವರು ರೈಲ್ವೇ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ರೈಲಿನ ಪೈಲೆಟ್ ವೇಗದಲ್ಲಿದ್ದ ರೈಲಿನ ವೇಗವನ್ನು ಕಡಿಮೆಗೊಳಿಸಿದ್ದಾರೆ. ಹಾಗಾಗಿ ರೈಲು ವ್ಯಕ್ತಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ವ್ಯಕ್ತಿಯ ತಲೆಗೆ ಗಂಭೀರ ಗಾಯವಾಗಿದೆ.
ತಕ್ಷಣಕ್ಕೆ ಘಟನಾ ಸ್ಥಳದ ವ್ಯಾಪ್ತಿಯಲ್ಲಿ ಯಾವ ವ್ಯವಸ್ಥೆಯು ಇಲ್ಲದ ಹಿನ್ನಲೆಯಲ್ಲಿ ಅದೇ ರೈಲಿನಲ್ಲಿದ್ದ ರೈಲ್ವೇ ಟಿಕೇಟ್ ಇನ್ ಸ್ಪೆಕ್ಟರ್ ವಿಠಲ್ ನಾಯಕ್ ಮತ್ತು ಗಾರ್ಡ್ ಗಳು ಗಾಯಾಳುವನ್ನು ಪ್ರಯಾಣಿಕರ ರೈಲಿನಲ್ಲಿ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ನಡುವೆ ಇನ್ ಸ್ಪೆಕ್ಟರ್ ಪುತ್ತೂರು ರೈಲ್ವೇ ಸ್ಟೇಷನ್ ಮಾಸ್ಟರ್ ಹರಿಚರಣ್ ಯಾದವ್ ಅವರಿಗೆ ವಯರ್ ಲೆಸ್ ಸಂಪರ್ಕದಲ್ಲಿ ಮಾಹಿತಿ ನೀಡಿದ್ದರು.
ಸ್ಟೇಷನ್ ಮಾಸ್ಟರ್ 108 ಆ್ಯಂಬುಲೆನ್ಸ್ ಗೆ ಕರೆ ಮಾಡಿದ ಹಿನ್ನೆಲೆಯಲ್ಲಿ ರೈಲು ಪುತ್ತೂರಿಗೆ ತಲುಪುತ್ತಲೇ ರೈಲಿನಿನಂದ ಗಾಯಾಳುವನ್ನು ಆ್ಯಂಬುಲೆನ್ಸ್ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಒಟ್ಟಿನಲ್ಲಿ ರೈಲ್ವೇ ಪೈಲಟ್ ನ ಸಮಯಪ್ರಜ್ಞೆಯಿಂದ ಮತ್ತು ರೈಲ್ವೇ ಅಧಿಕಾರಿಗಳ ಟೀಮ್ ವರ್ಕ್ ನಿಂದಾಗಿ ವ್ಯಕ್ತಿಯೊಬ್ಬರ ಪ್ರಾಣ ಉಳಿದಿದೆ.