ಕೇರಳ ಸರ್ಕಾರವು ಬುಡಕಟ್ಟು ಪ್ರದೇಶದ ಮಕ್ಕಳು ಅರ್ಧದಲ್ಲಿ ಶಾಲೆ ಬಿಡುವುದನ್ನು ತಡೆಯುವ ಸಲುವಾಗಿ ‘ಸಮುದಾಯ ಅಭಿವೃದ್ಧಿ ಕಾರ್ಯಕ್ರಮ’ ಆರಂಭಿಸಲಿದೆ. ಈ ಬಗ್ಗೆ ಕೇರಳದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಕೆ. ರಾಧಾಕೃಷ್ಣನ್ ಅವರು ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಂತೆ ಹಾಗೂ ಬುಡಕಟ್ಟು ಕುಟುಂಬಗಳನ್ನು ಭೇಟಿಯಾಗಿ ಅವರಿಗೆ ಶಿಕ್ಷಣದ ಅರಿವು ಮೂಡಿಸುವಂತೆ ಸರ್ಕಾರ ಸಂಬಂಧಿತ ಸ್ಥಳೀಯ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಘಟನೆಗಳಿಗೆ ಮನವಿ ಮಾಡಿದೆ. 2020- 21ನೇ ಶೈಕ್ಷಣಿಕ ಸಾಲಿನಲ್ಲಿ ಪರಿಶಿಷ್ಟ ಜಾತಿಯ ವರ್ಗಕ್ಕೆ ಸೇರಿದ 18,000 ವಿದ್ಯಾರ್ಥಿಗಳು ಹೊರಗುಳಿದಿದ್ದಾರೆ. ಈ ಪೈಕಿ ಶೇ. 85ರಷ್ಟು ಮಕ್ಕಳನ್ನು ಮರಳಿ ಕರೆತರಲಾಗಿದೆ ಎಂದು ಕೆ ರಾಧಾಕೃಷ್ಣನ್ ಅವರು ಹೇಳಿದ್ದಾರೆ.
ಇನ್ನು ಎಂಜಿನಿಯರಿಂಗ್ನಲ್ಲಿ ತೇರ್ಗಡೆಯಾಗದ ಪರಿಶಿಷ್ಠ ಜಾತಿಯ ಮಕ್ಕಳಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು (ರಿಮೆಡಿಯಲ್ ಕೋರ್ಸ್) ನಡೆಸಲಾಗಿದೆ. ಆದರೆ, ಕಾರ್ಯಕ್ರಮವು ಪರಿಣಾಮಕಾರಿಯಾಗಿ ನಡೆದಿಲ್ಲ ಎಂದು ಅಂಕಿಅಂಶಗಳು ಸೂಚಿಸುತ್ತವೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಎಸ್ಸಿ ಮತ್ತು ಎಸ್ಟಿ ವರ್ಗಕ್ಕೆ ಸೇರಿದ 175 ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಕೇರಳ ಶಿಕ್ಷಣ ಇಲಾಖೆ ಸೌಲಭ್ಯ ನೀಡುತ್ತಿದೆ.