Monday, June 30, 2025
Homeಕರಾವಳಿಮತ್ತೆ ಬರುತ್ತಿದೆ ಮಳೆಗಾಲ.. ಮೂಲಭೂತ ಸೌಕರ್ಯಕ್ಕಿರಲಿ ಮೊದಲ ಆದ್ಯತೆ

ಮತ್ತೆ ಬರುತ್ತಿದೆ ಮಳೆಗಾಲ.. ಮೂಲಭೂತ ಸೌಕರ್ಯಕ್ಕಿರಲಿ ಮೊದಲ ಆದ್ಯತೆ

spot_img
- Advertisement -
- Advertisement -

ಬೆಳ್ತಂಗಡಿ: ಹಚ್ಚ ಹಸಿರಿನ ಪಚ್ಚೆ ಪೈರು, ಕಂಗು-ತೆಂಗುಗಳ ವಯ್ಯಾರದಿಂದ, ಪಂಚಲಿಂಗ ಅಡಿದಾವರೆಗಳಲ್ಲಿ, ಸ್ವಚ್ಛ ಗಾಳಿಯ ಬೀಸುವಿಕೆಯೊಂದಿಗೆ, ಸ್ವರ್ಗವೇ ಭೂಮಿಗಿಳಿದಂತೆ ಕಂಗೊಳಿಸುತ್ತಿದೆ, ಮತ್ತೊಂದೆಡೆ ಮೃತ್ಯುಂಜಯನ ನಿರಂತರ ಹರಿಯುವಿಕೆಯು ಜನರ ಜಲದಾಹವನ್ನು ನೀಗಿಸಿದರೆ, ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣ ಕಾಡಿನ ಮನೋಹರ ದೃಶ್ಯವೂ ರಸಾಸ್ವಾದಕನ ಕಣ್ಮನ ಸೆಳೆಯದೆ ಇರಲಾರದು, ಹೀಗೆ ಯಾವುದೇ ಕುಂದು ಕೊರತೆ ಇಲ್ಲದೆ ಜೀವನ ನಡೆಸುತ್ತಿದ್ದ ಪಶ್ಚಿಮ ಘಟ್ಟದ ತಪ್ಪಲಿನ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಎಂಬ ಪುಟ್ಟ ಗ್ರಾಮದಲ್ಲಿ ವರ್ಷ ಋತುವಿನ ಆರಂಭದಲ್ಲಿ ಸಾಧಾರಣ ಮಳೆಯಾದರೆ ಜನಜೀವನ ಎಂದಿನಂತೆ ನಾಟಿಯ ಕೆಲಸ, ತೋಟಗಳಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದರೆ, ಮಳೆಗಾಲದ ಇದ್ದಿಲು ಸಂಗ್ರಹ, ಮಾಡಿನ ಹಂಚು ಸರಿಪಡಿಸಿ ಮಳೆ ನೀರು ಮನೆಯೊಳಗೆ ಬರದಂತೆ ತಡೆಯುವ ಕಾಯಕ ನಡೆಯುತ್ತಿತ್ತು.

ಒಂದು ದಿನ ಬೆಳಗಾತ ಆರಂಭವಾದ ವರ್ಷಧಾರೆಯು ಎಡೆಬಿಡದೆ ಮಧ್ಯಾಹ್ನದವರೆಗೆ ಸುರಿಯುತ್ತಿತ್ತು, ಅಪರಾಹ್ನ ಸುಮಾರು 1ರ ಹೊತ್ತಿಗೆ ಮೃತ್ಯುಂಜಯನು ಅಪಾಯದ ಮಟ್ಟಕ್ಕೆ ಬಂದನೆಂದು ಸುದ್ದಿಯಾಗಿದೆ, ಜನ ಗಾಬರಿಯಾದಂತೆ ಕಂಡರೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ, ಸಾಯಂಕಾಲ ಮೂರರ ಹೊತ್ತಿಗೆ ಹರಿದು ಬಂದ ನದಿಯ ನೀರು ಕಾಡಿನ ಮಧ್ಯದಿಂದ ನೂರಾರು ವರ್ಷ ಹಳೆಯ ಮರಗಳನ್ನು ಬುಡ ಸಮೇತ ಕಿತ್ತು ತಂದು ಎಲ್ಲೆ ಮೀರಿ ಹರಿಯಿತು, ಊರ ಜನರೆಲ್ಲ ನದಿ ನೀರಿಗೆ ಹೆದರಿ ಪ್ರಾಣ ರಕ್ಷಣೆಗೆ ಮನೆ ಬಿಟ್ಟು ಓಡಿ ಬಂದರೆ, ನಡೆಯಲಾರದ ಹಿರಿ ಜೀವಗಳ ಪಾಡು ಹೇಳತೀರದ್ದು, ಹಟ್ಟಿಗಳಲ್ಲಿ ಬಾಕಿ ಉಳಿದಿರುವ ಪಶುಗಳ ಪಾಡು ಊಹಿಸಲು ಸಾಧ್ಯವಿಲ್ಲದ್ದು, ಕ್ಷಣ ಮಾತ್ರದಲ್ಲಿ ಆದ ಬದಲಾವಣೆ ಕೆಲವು ಮನಸ್ಸುಗಳನ್ನು ಮಾನಸಿಕವಾಗಿ ಖಿನ್ನರಾಗಿ ಮಾಡಿತು. ಆಸರೆಯಾಗಿದ್ದ ಮನೆ ಕಣ್ಮುಂದೆ ಕೊಚ್ಚಿ ಹೋಗುತ್ತಿದ್ದರೆ, ಇತ್ತ ಜೀವನಕ್ಕೆ ಆಸರೆಯಾಗಿದ್ದ ಗದ್ದೆ ತೋಟಗಳು ನದಿಯಾಗಿ ಹರಿದು ಬರಿದಾದ ಮರಳುಗಾಡಿನಂತೆ ಭಾಸವಾಗುತ್ತಿದೆ.

ಶಾಸಕರ ಸಾಹಸ

ಹರಿದು ಹೋಳಾದ ಗ್ರಾಮದಲ್ಲಿ ಗೋಳಾಟವೇ ಎಲ್ಲೆಡೆಯಾದರೆ, ಭರವಸೆಯ ಬೆಳಕು ಮೂಡಿಸಿದವರು ನಮ್ಮ ಶಾಸಕರು, ಶಾಸಕರು ಎನ್ನುವುದಕ್ಕಿಂತ ಹೆಚ್ಚು ಮನೆಯ ಮಗನಂತೆ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ದೇವಾಲಯದಲ್ಲಿ ಆರಂಭವಾದ ಸಾಂತ್ವಾನ ಕೇಂದ್ರದಲ್ಲಿ ಸಂತ್ರಸ್ತರ ಮನೆಯವರಂತೆ ನಿಂತು ಮುಂದಿನ ಜೀವನಕ್ಕೆ ಬೇಕಾದ ಭರಪೂರ ಪರಿಹಾರ ನೀಡಿ, ಬಾಡಿಗೆ ಮನೆಯ ಸೌಕರ್ಯ ಒದಗಿಸಿ, ಮುಂದಿನ ದಿನಗಳಲ್ಲಿ ಗದ್ದೆ ತೋಟದ ಹೊಯಿಗೆ ತೆಗೆಸಿ, ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್, ಮನೆಯ ರಿಪೇರಿ ಮತ್ತು ಹೊಸ ಮನೆಗಳ ವಿಲೇವಾರಿಯಲ್ಲಿ ರಕ್ತವನ್ನು ಬೆವರಾಗಿಸಿ ದುಡಿದರು.

ಪರಿಸ್ಥಿತಿ-ಪರಿಹಾರ

ಮನೆ ಮನೆಯ ಖೇದಗಳಿಗೆ ಶಾಸಕರು ಸಮರೋಪಾದಿಯಲ್ಲಿ ಪರಿಹಾರ ನೀಡಿದರೆ, ಮನೆಗೆ ಬೇಕಾದ ಮೂಲಭೂತ ಸೌಕರ್ಯಗಳು ಕಿಟ್ ಗಳು ನೂರಾರು ಕುಟುಂಬಗಳಿಗೆ ತಲುಪಿತ್ತು, ಮನೆ ಕಳೆದುಕೊಂಡವರು ಮತ್ತು ಭಾಗಶಃ ಹಾನಿಗೊಂಡ ಮನೆಗಳಿಗೆ ಮನೆಕಟ್ಟುವ ವ್ಯವಸ್ಥೆಯಾಗಿ ಹಣ ಮಂಜೂರು ಮಾಡಿದರೆ, ಗದ್ದೆ ತೋಟಗಳ ಹೂಳು ತೆಗೆದು ‘ಬದುಕು ಕಟ್ಟೋಣ ಬನ್ನಿ’ ಎಂದು ಮತ್ತೆ ಬದುಕುವ ಸ್ಪೂರ್ತಿಯನ್ನು ಇತ್ತರು.

ಪರಿಹಾರ ಕಾರ್ಯ ಯಶಸ್ವಿಯಾಗಿ ಸಾಗುತ್ತಿದ್ದರೂ, ಅಲ್ಲಲ್ಲಿ ಮನಸ್ಸುಗಳಲ್ಲಿ ವೈರುಧ್ಯಗಳು ಕುಟ್ಟುತ್ತಿತ್ತು, ಪರಿಹಾರ ಸಾಮಗ್ರಿಗಳ ಹಂಚುವಿಕೆಯ ಅಸಮಾಧಾನ, ಮೂಲಭೂತ ಸೌಕರ್ಯಗಳ ಹಂಚುವಿಕೆಯಲ್ಲಿ ಪ್ರದೇಶವಾರು ಬೇಧವಾಗಿದೆ ಎಂಬ ವಾದಗಳು, ಜಾನುವಾರುಗಳ ಆಹಾರ ಹಂಚಿಕೆಗೆ ಸಂಬಂಧಿಸಿದಂತೆ ಮಹಾ ವಾಕ್ಸಮರಗಳನ್ನು ಮರೆ ಮಾಚುವಂಥದ್ದಲ್ಲ.

ಪ್ರಕೃತಿ ಮುನಿದದ್ದೇಕೆ??

ಪ್ರಕೃತಿ ವಿಕೋಪದ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಮಾಡಿಕೊಳ್ಳುತ್ತಿರುವ ನಾವು, ಈ ಪ್ರಕೃತಿ ವಿಕೋಪ ಆದದ್ದು ಹೇಗೆ? ಈ ರೀತಿಯ ವಿಪರೀತ ಮಳೆ ಸುರಿದಿದ್ದೇಕೆ? ಎಂಬ ಬಗ್ಗೆ ವಿಮರ್ಶೆ ಮಾಡುವುದರಲ್ಲಿ ಹಿಂದೆ ಬಿದ್ದಿದ್ದೇವೆ.

ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ ಸೆಂಥಿಲ್ ‘ಇದೊಂದು ಮೇಘ ಸ್ಫೋಟ’ ಮೇಘಸ್ಫೋಟಕ್ಕೆ ಗುಡ್ಡೆ ಜರಿದಿದೆ ಎಂದು ಸಮಜಾಯಿಷಿ ನೀಡಿ ಕೆಲಸಕ್ಕೆ ರಾಜೀನಾಮೆ ಇತ್ತು ಓಡಿಹೋದರೆ, ಮತ್ತೆ ಬಂದವರಿಗೆ ಇದರ ಮಾಹಿತಿಯ ಕೊರತೆಯಿದೆ ಎಂಬಂತಿದೆ. ಆಡಳಿತ ಯಂತ್ರವೂ ಈ ವಿಚಾರವನ್ನು ತೀವ್ ರಸ್ವರೂಪದ್ದೆಂದು ಎಂದು ಗಮನ ಹರಿಸಿಲ್ಲ, ಗ್ರಾಮದ ಜನ ಪ್ರತಿನಿಧಿಗಳಿಗೆ ಇಚ್ಛಾಶಕ್ತಿಯ ಕೊರತೆ ಇದ್ದು ಮುಂಬರುವ ಅಪಾಯಗಳಿಗೆ ಆಹ್ವಾನ ನೀಡಿದಂತಿದೆ.

ನದಿಯ ಹೂಳು-ಜನರ ಗೋಳು

ಮಳೆಗಾಲ ಮುಗಿದಿದೆ, ನದಿ ಎಲ್ಲೆಂದರಲ್ಲಿ ಹರಿದಿದೆ, ಮಳೆಗಾಲದಲ್ಲಿ ಕಾಡಿನಿಂದ ಹೊತ್ತು ತಂದ ಮಣ್ಣು ನದಿಯನ್ನು ಭರ್ತಿ ಮಾಡಿದೆ, ಇದರಿಂದ ನದಿ ಮತ್ತು ದಡ ಸಮತಟ್ಟಾದಂತೆ ಭಾಸವಾಗುತ್ತದೆ. ನದಿಯೂ ಹೂಳು ತುಂಬಿದ್ದು ಮುಂದಿನ ಮಳೆಗಾಲಕ್ಕೆ ನದಿಯಲ್ಲಿ ನೀರು ಹರಿಯಲು ಎಡೆ ಇಲ್ಲದಂತಾಗಿದೆ. ನದಿ ದಡಗಳಲ್ಲಿ ತಡೆಗೋಡೆ ನಿರ್ಮಾಣವಾಗಿದ್ದು,ಅದರ ಕಾಮಗಾರಿ ಬಾಕಿಯಾಗಿದೆ. ಮುಂದಿನ ಮಳೆಗಾಲದಲ್ಲಿ ಈ ತಡೆಗೋಡೆಯು ನೀರನ್ನು ತಡೆಯಲು ಸಾಧ್ಯವಿಲ್ಲ ಮತ್ತು ತಡೆಗೋಡೆಗಳಿಗೆ ಹಾನಿಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿದೆ.

ಸ್ವಯಂರಕ್ಷಣಾ ತರಬೇತಿ-ನಾಯಕತ್ವ

ಕಾಡಿನ ಮರಗಳೆಲ್ಲ ಹೊಳೆಯಾಗಿ ಹರಿದಾಗ ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿಯೂ ಚಾರ್ಮಾಡಿಯು ಬಹು ದೊಡ್ಡ ಸುದ್ದಿಯಾಗಿತ್ತು. ಈ ಎಲ್ಲದರ ನಡುವೆ ಚಾರ್ಮಾಡಿಗರನ್ನು ರಕ್ಷಿಸುವಲ್ಲಿ ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ (NDRF)ಮತ್ತು ಅನೇಕ ಸಾಹಸಿಗರು ಸಹಾಯ ಹಸ್ತ ನೀಡಿ ರಕ್ಷಣಾ ಕಾರ್ಯವನ್ನು ಕೈಗೊಂಡರೆ, ಊರ ಪರವೂರ ಜನರು ಜನ- ಜಾನುವಾರುಗಳ ಸ್ಥಳಾಂತರಕ್ಕೆ ನೀಡಿದ ಸಹಕಾರವನ್ನು ಮರೆಯುವಂತಿಲ್ಲ.

ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸದಲ್ಲಿ ಆಡಳಿತ ಯಂತ್ರದ ಕಾರ್ಯವೈಖರಿಯನ್ನು ಅಲ್ಲಗಳೆಯುವಂತಿಲ್ಲ.

ಇದನ್ನೆಲ್ಲ ಅರಿತಿರುವ ನಾವು ಮುಂದಿನ ಸವಾಲಿಗೆ ಪ್ರವಾಹದ ವಿರುದ್ಧವಾಗಿ ಹೋರಾಡುವ ಸಾಮರ್ಥ್ಯವನ್ನು ತೋರಬೇಕಿದೆ. ರಕ್ಷಣೆಗೆ ಬೇಕಾದ ಸಲಕರಣೆ, ಅದಕ್ಕೆ ಬೇಕಾದ ತರಬೇತಿ ಇವುಗಳನ್ನು ಯೋಜನೆ ಮಾಡಿಕೊಂಡು ಮುಂದಿನ ಹೆಜ್ಜೆ ಇಡಬೇಕು. ನದಿ ಹರಿಯುವ ಎಲ್ಲ ಪ್ರದೇಶದ ಜನರನ್ನು ಒಟ್ಟುಗೂಡಿಸಿ ಅವರಲ್ಲಿರುವ ಅನುಭವಗಳನ್ನು, ನೈಪುಣ್ಯತೆಗಳನ್ನು ಸಂಗ್ರಹಿಸಿ ಮಳೆಗಾಲದ ಅವಾಂತರವನ್ನು ತಪ್ಪಿಸಬೇಕು.

ಮಳೆಗಾಲದಲ್ಲಿ ನದಿ ನೀರು ಎಲ್ಲೆ ಮೀರಿ ಹರಿಯುವಿಕೆಯಿಂದ ರಕ್ಷಣೆಗೆ ಬೇಕಾದ ಪೂರ್ವ ತಯಾರಿಯ ಬಗ್ಗೆ ಜನಪ್ರತಿನಿಧಿ ಅಧಿಕಾರಿ ಗಮನ ಸೆಳೆಯಬೇಕು, ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿ ಪಡೆಯಬೇಕು. ಮಳೆಗಾಲದಲ್ಲಿ ನದಿ ದಾಟಲು ಸುಲಭವಾಗುವಂತೆ ಬೇಕಾದ ಎಲ್ಲ ರೀತಿಯ ಸಾಮಗ್ರಿಗಳು ಪೂರ್ವ ತಯಾರಿಯನ್ನು ಮಾಡಬೇಕಾಗುತ್ತದೆ.

ಉತ್ತಮ ನಾಯಕತ್ವ ಬೇಕೆ?

ಈ ರೀತಿಯ ಪ್ರಾಕೃತಿಕ ಲಕ್ಷಣವನ್ನು ಹೊಂದಿರುವ ಚಾರ್ಮಾಡಿಯಲ್ಲಿ, ಪ್ರಕೃತಿ ವಿಕೋಪವನ್ನು ಗೆಲ್ಲಲು ಒಬ್ಬ ಉತ್ತಮ ನಾಯಕನ ಅಗತ್ಯತೆ ವ್ಯಕ್ತವಾಗಿತ್ತು, ಎಲ್ಲ ಜನರನ್ನು ಒಗ್ಗೂಡಿಸುವ ನಾಯಕತ್ವದ ಕೊರತೆ ಎದ್ದು ಕಾಣುತ್ತಿತ್ತು. ಊರ ಪರವೂರ ಜನರ ಒಡನಾಟವಿದ್ದು, ಜನರೊಂದಿಗೆ ಒಮ್ಮತದಿ ಬೆರೆತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಎಲ್ಲರೂ ಒಪ್ಪುವಂತಹ ನಾಯಕತ್ವದ ಗುಣ ಬೆಳೆಸಿಕೊಂಡಂತಹ ನಾಯಕರು ಬೇಕಾಗಿದೆ.

ಮತ್ತೆ ಬಂದಿದೆ ಮಳೆಗಾಲ

ಸಮಸ್ಯೆಗಳು ಮುಗಿದಿದೆ ಎಂದು ಎನ್ನುವಷ್ಟರಲ್ಲಿ ಮತ್ತೆ ಮಳೆ ಅಮೃತ ಸ್ಪರ್ಶವು ಭುವಿಯನ್ನು ಮುಟ್ಟಿದಂತಿದೆ. ನದಿಯ ದಡದಲ್ಲಿ ವಾಸವಾಗಿರುವ ಮತ್ತು ಗದ್ದೆ ತೋಟ ಹೊಂದಿರುವವರು ಮನಸ್ಸಿನಲ್ಲಿ ಡವಡವ ಆರಂಭವಾಗಿದೆ. ಕಳೆದ ಬಾರಿ ಆದ ನಷ್ಟದ ದುಃಖದಲ್ಲಿರುವಾಗಲೇ ಈ ಬಾರಿಯ ಭಯವೂ ಹೇಳತೀರದ್ದು, ಮಧುಗುಂಡಿಯ ಪ್ರದೇಶದಲ್ಲಿ ಜರಿತದ ಅವಶೇಷಗಳು ಇನ್ನೂ ಉಳಿಕೆಯಾಗಿದ್ದು, ಈ ಬಾರಿಯ ಮಳೆಯ ಅದನ್ನು ಹೊತ್ತು ತರದೇ ಇರದು ಎಂಬ ಭಯದ ಕಾರ್ಮೋಡವೂ ಜನಜೀವನದ ಬಾನಿನಲ್ಲಿ ಕವಿ ದಂತಿದೆ.

ಸಂವತ್ಸರವೇ ಕಾಣದ ಹಠಮಾರಿ ಮಳೆಯು ಜನಮಾನಸದ ಕಣ್ಣೀರ ಮಳೆಯಾಗಿಸಿದೆ. ಮುಂದಿನ ತಲೆಮಾರಿನ ಅತಿ ದೊಡ್ಡ ಸವಾಲಾಗಿದ್ದು, ಪ್ರಕೃತಿಯಲ್ಲಿ ಮಾನವನ ಅಧಿಕಾರ ಹೆಚ್ಚಾದಂತೆ ಪ್ರಕೃತಿಯೇ ಮುನಿದು ಭಿನ್ನರೂಪವನ್ನು ಪಡೆಯುತ್ತದೆ. ಅದರಂತೆ ಮಾನವನು ಅದಕ್ಕೆ ಒಗ್ಗಿಕೊಳ್ಳಬೇಕಾಗುತ್ತದೆ.

ಮತ್ತೆ ಮಳೆ ಬರಲಾರಂಭಿಸಿದೆ ಕಾರ್ಮೋಡ ಕಂಡಂತೆ ಹೆದರುವ ಜನಕ್ಕೆ ಆ ಮಹಾಮಳೆಯು ನೆನಪಾಗಿ ಕಣ್ಣು ತೇವವಾಗುತ್ತದೆ. ಸರಿಯಾದ ನಿರ್ಧಾರಗಳನ್ನು ತೆಗೆದು ಕೊಳ್ಳುತ್ತಾ ಈ ಬಾರಿ ಮಳೆಗಾಲವನ್ನು ಎದುರಿಸಲು ಜನ ಸಿದ್ಧರಾಗಬೇಕಾಗಿದೆ.

✒️ನಿತಿನ್ ಕುಮಾರ್ ಚಾರ್ಮಾಡಿ
?9632711632

- Advertisement -
spot_img

Latest News

error: Content is protected !!