ರಾಷ್ಟ್ರ ಭಾಷೆಯ ವಿಚಾರವಾಗಿ ನಟ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ಟ್ವೀಟರ್ ನಲ್ಲಿ ದೊಡ್ಡ ಸಮರವೇ ನಡೆದಿತ್ತು. ಕೆಲವೇ ಸಮಯದಲ್ಲಿ ನಡೆದ ಟ್ವೀಟ್ ಪ್ರಶ್ನೋತ್ತರವು ಇಡೀ ರಾಷ್ಟ್ರದಾದ್ಯಂತ ಸಂಚಲನವನ್ನು ಉಂಟುಮಾಡಿತ್ತು.
ನಟ ಅಜಯ್ ಹಾಗೂ ಕಿಚ್ಚ ಸುದೀಪ್ ತಮ್ಮ ತಮ್ಮ ಸಮರ್ಥನೆಗಳನ್ನು ನೀಡುತ್ತಾ ಸುಮ್ಮನಾಗಿದ್ದರೂ. ಆದರೆ ಕೆಲವರು ಮಾತ್ರ ಈ ಕುರಿತು ಪರ ವಿರೋಧದ ಹೇಳಿಕೆಗಳನ್ನು ನೀಡುತ್ತಾ ಬಂದರು. ಆದರೆ ಈ ವಿಷಯ ತಣ್ಣಗಾಯಿತು ಎನ್ನುವಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತೆ ಟ್ವೀಟ್ ವಿಚಾರದ ಕುರಿತು ಮಾತನಾಡಿ, ಮತ್ತೊಂದು ಸುತ್ತಿನ ಚರ್ಚೆಗೆ ದಾರಿ ಮಾಡಿದ್ದಾರೆ.
ಜೈಪುರದಲ್ಲಿ ನಡೆಯುತ್ತಿರುವ ಬಿಜೆಪಿ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಾದೇಶಿಕ ಭಾಷೆಗಳ ಕುರಿತಾಗಿ ನಡೆಯುತ್ತಿರುವ ವಿವಾದಗಳನ್ನು ಗಮನಿಸುತ್ತಿದ್ದೇನೆ. ಭಾಷೆಗಳ ವಿಚಾರದ ಮೇಲೆ ವಿವಾದಗಳು ಉಂಟಾಗಬಾರದು. ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲೂ ನಾವು ಸಂಸ್ಕೃತಿಯನ್ನು ಕಾಣುತ್ತಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎಲ್ಲಾ ಭಾಷೆಗಳಿಗೂ ಪ್ರಾಮುಖ್ಯತೆ ನೀಡಿದ್ದಾರೆ ಎಂದಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್, ನಾನು ರಾಷ್ಟ್ರ ಭಾಷೆಯ ಬಗ್ಗೆ ಮಾತನಾಡುವಾಗ ಸುಖಾಸುಮ್ಮನೇ ವಾದ ಮಾಡಿದರು. ನನ್ನ ಮಾತಿನ ಅರ್ಥವೇ ಬೇರೆಯಾಗಿತ್ತು. ಆದರೆ ಅವರು ಅರ್ಥೈಸಿಕೊಂಡದ್ದೇ ಬೇರೆ. ಅದನ್ನೇ ಪ್ರಧಾನಿ ಮೋದಿಯವರು ಈಗ ಹೇಳಿದ್ದು ಅವರಿಗೆ ಕೃತಜ್ಞತೆಗಳು ಎಂದಿದ್ದಾರೆ.
ಪ್ರಧಾನಿ ಮೋದಿ ಅವರು ಪ್ರಾದೇಶಿಕ ವಿಚಾರದ ಕುರಿತು ಮಾತನಾಡಿದ್ದು, ಬಿಟೌನ್ ನಲ್ಲಿ ಭಾರೀ ಸದ್ದು ಮಾಡಲಾಗಿದೆ. ಹಿಂದಿ ಭಾಷೆಯನ್ನು ಸಮರ್ಥಿಸಿಕೊಂಡು ಮಾತನಾಡಿದ ಸ್ಟಾರ್ ನಟರು ಪ್ರಧಾನಿ ಮಾತಿನಿಂದ ಮೌನಕ್ಕೆ ಜಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ಬಾಲಿವುಡ್ ನಟರ ಅಜ್ಞಾನಕ್ಕೆ ಪ್ರಧಾನಿ ಸರಿಯಾಗಿಯೇ ಉತ್ತರ ನೀಡಿದ್ದಾರೆಂದು ಟ್ರೋಲ್ ಮಾಡಲಾಗುತ್ತಿದೆ.