ಕೇರಳ: ಪಕ್ಕದ ಮನೆಯಲ್ಲಿ ವಾಸವಿದ್ದ ಪೊಲೀಸ್ ಸಿಬ್ಬಂದಿ ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ್ದಕ್ಕೆ ನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ತಿರುವನಂತಪುರದ ಮೈಲಕ್ಕರದಲ್ಲಿ ನಡೆದಿದೆ.
ಮೃತಳನ್ನು 18 ವರ್ಷದ ತಸ್ಲಿಮಾ ಎಂದು ಗುರುತಿಸಲಾಗಿದೆ.ಪಕ್ಕದ ಮನೆಯಲ್ಲಿ ವಾಸವಿದ್ದ ಪೊಲೀಸ್ ಸಿಬ್ಬಂದಿಯೇ ಆಕೆಯ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪಿಯುಸಿ ಓದುತ್ತಿದ್ದ ತಸ್ಲಿಮಾಳ ಹಿಂದೆ ಬಿದ್ದಿದ್ದ ಅಖಿಲ್ ಮದುವೆಯಾಗುವುದಾಗಿ ನಂಬಿಸಿದ್ದ. ಹೀಗಾಗಿ ಹುಡುಗಿ ಮನೆಯವರು ಸಹ ಒಪ್ಪಿಗೆ ನೀಡಿದ್ದರು.
ಆದರೆ ಹುಡುಗನ ಮನೆಯಲ್ಲಿ ಮದುವೆಗೆ ವಿರೋಧ ಕೇಳಿಬಂದಿತ್ತು. ಆದರೆ 2 ವರ್ಷದ ಬಳಿಕ ಅಖಿಲ್ ಬೇರೊಂದು ಹುಡುಗಿಯೊಂದಿಗೆ ಸುತ್ತಾಡುತ್ತಿದ್ದ. ಈ ಬಗ್ಗೆ ಕೇಳಿದರೆ ನಿನ್ನ ಜೊತೆ ಮದುವೆಯಾಗಲ್ಲ ಎಂದು ನಿರಾಕರಿಸುತ್ತಿದ್ದ. ಅಲ್ಲದೆ ಹುಡುಗನ ಕುಟುಂಬಸ್ಥರು ವರದಕ್ಷಿಣೆಯಾಗಿ 10 ಲಕ್ಷ ರೂಪಾಯಿ ಹಣ ಹಾಗೂ 25 ಪವನ್ ಬಂಗಾರಕ್ಕೆ ಬೇಡಿಕೆ ಇಟ್ಟಿದ್ದರು.
ಇದರಿಂದ ನೊಂದ ಯುವತಿ ಮನೆಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಹುಡುಗಿ ಮನೆಯವರು ಪೊಲೀಸ್ ಸಿಬ್ಬಂದಿ ಅಖಿಲ್ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.