ಮಂಗಳೂರು: ನಗರದ ವ್ಯಕ್ತಿಯೋರ್ವನು ವಿದೇಶಿ ಪ್ರಜೆಯಿಂದ ಹಣ ಪಡೆದು ವಂಚನೆಗೈದಿದ್ದು, ಈ ಹಣವನ್ನು ಮಂಗಳೂರು ಪೊಲೀಸರು ಮತ್ತೆ ದೊರಕಿಸಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ವಿದೇಶಿ ಪ್ರಜೆ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾನೆ.
ಫ್ರಾನ್ಸ್ ಮೂಲದ ಯೋ ಫಿಲ್ ಎಂಬ ವಿದೇಶಿ ಪ್ರಜೆ ಮಂಗಳೂರು ನಗರದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ. ಈತ ಚಿಲಿಂಬಿಯಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ವಾಸ್ತವ್ಯವಿದ್ದ. ಅಲ್ಲಿ ಪರಿಚಿತನಾದ ವ್ಯಕ್ತಿಯೋರ್ವನು ಈತನಿಗೆ ಹೊಟೇಲ್ ಉದ್ಯಮ ಆರಂಭಿಸುತ್ತೇನೆಂದು 7.7 ಲಕ್ಷ ರೂ. ಹಣವನ್ನು ಹಂತಹಂತವಾಗಿ ಪಡೆದಿದ್ದನು. ಆದರೆ ಆತ ಆ ಬಳಿಕ ಮರಳಿ ಆ ಹಣವನ್ನು ನೀಡದೆ ಈತನ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದ.
ಈ ಹಿನ್ನೆಲೆಯಲ್ಲಿ ಆತ ಪೊಲೀಸ್ ದೂರು ದಾಖಲಿಸುತ್ತಾನೆ. ಪ್ರಕರಣವನ್ನು ಮುತುವರ್ಜಿ ವಹಿಸಿ ತನಿಖೆ ನಡೆಸಿದ ಡಿಸಿಪಿ ಹರಿರಾಂ ಶಂಕರ್ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದೆ. ಈ ಸಂದರ್ಭ ವಂಚನೆ ಮಾಡಿರುವಾತನ ತಂದೆ ಪುತ್ರ ತೆಗೆದುಕೊಂಡಿದ್ದ 7.7 ಲಕ್ಷ ರೂ. ಹಣವನ್ನು ವಿದೇಶಿ ಪ್ರಜೆಗೆ ಮರಳಿ ನೀಡಿದ್ದಾರೆ. ಆರೋಪಿಯ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಬಂಧನ ನಡೆಸಿಲ್ಲ. ಆದರೆ ಪ್ರಕರಣದ ವಿಚಾರಣೆಗೆ ಹಾಜರಾಗಬೇಕೆಂದು ಮರಳಿ ಕಳುಹಿಸಲಾಗಿದೆ. ಪೊಲೀಸರ ಕಾರ್ಯಕ್ಕೆ ವಿದೇಶಿ ಪ್ರಜೆ ಯೋ ಫಿಲ್ ಅಭಿನಂದನೆ ತಿಳಿಸಿದ್ದಾನೆ.