ಸಾಲಿಗ್ರಾಮ: ಕರಾವಳಿಯಲ್ಲಿ ಮುಸಲ್ಮಾನರಿಗೆ ವ್ಯಾಪಾರ ಬಹಿಷ್ಕಾರ ,ಹಲಾಲ್ ವಿವಾದ ಬಳಿಕ ಇದೀಗ ಅಂಗಡಿ ಹೆಸರು ಬದಲಿಸುವ ಅಭಿಯಾನ ಶುರುವಾಗಿದೆ. ಸಾಲಿಗ್ರಾಮ ಪೇಟೆಯಲ್ಲಿರುವ ಹಿಂದೂ ದೇವರುಗಳ ಹಾಗೂ ಪ್ರಸಿದ್ಧ ಕ್ಷೇತ್ರದ ಹೆಸರನಿಟ್ಟುಕೊಂಡು ವ್ಯವಹರಿಸುತ್ತಿದ್ದ ಸಾಲಿಗ್ರಾಮ ಫುಟ್ ವೇರ್ ಹೆಸರು ಬದಲಾಯಿಸುವಂತೆ ಸಾಲಿಗ್ರಾಮ ಪಟ್ಟಣಪಂಚಾಯತ್ ಗೆ ಹಿಂದೂ ಜಾಗರಣಾ ವೇದಿಕೆ ಮನವಿ ನೀಡಿದೆ. ಈ ಫೂಟ್ ವೇರ್ ಮುಸಲ್ಮಾನರಿಗೆ ಸೇರಿದ್ದಾಗಿದೆ.
ಈ ಬಗ್ಗೆ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಮುಖಂಡ ಶಂಕರ್ ಕೋಟ, ಸಾಲಿಗ್ರಾಮ ಎನ್ನುವ ಕ್ಷೇತ್ರ ಪಾವಿತ್ರ್ಯತೆ ಹೊಂದಿದ ಕ್ಷೇತ್ರವಾಗಿದೆ. ಈ ಊರಿನ ಹೆಸರನ್ನು ಇಟ್ಟುಕೊಂಡು ವ್ಯವಹರಿಸುವುದರ ಜೊತೆಗೆ ಹಿಜಾಬ್ ಗೆ ಸಂಬಂಧಿಸಿ ಕೋಟ್೯ ತೀರ್ಪು ಉಲ್ಲಂಘಿಸಿ ಬಂದ್ ಮಾಡಿದ್ದಾರೆ. ಆದ್ದರಿಂದ ಮುಸ್ಲಿಂ ಸಮುದಾಯಕ್ಕೆ ನಮ್ಮ ಪವಿತ್ರ ಕ್ಷೇತ್ರದ ಹೆಸರನ್ನು ಬಳಸಿಕೊಂಡು ವ್ಯವಹರಿಸಿ ದ್ರೋಹ ಎಸೆಗುತ್ತಿದ್ದಾರೆ. ಇಂತಹ ವ್ಯಕ್ತಿಯ ಅಂಗಡಿಯ ಹೆಸರು ಬದಲಾಯಿಸಿಕೊಳ್ಳಬೇಕು ಎಂದು ಆಗ್ರಹಿಸಿ ಪಟ್ಟಣಪಂಚಾಯತ್ ಗೆ ಮನವಿ ನೀಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಕೋಟ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಪ್ರಶಾಂತ್ ಮಟಪಾಡಿ ಮತ್ತಿತರರು ಉಪಸ್ಥಿತರಿದ್ದರು.


