ಹಾಸನ: ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ಯಾವ ಮಟ್ಟಕ್ಕೆ ಹೋಗಿದೆ ಅನ್ನೋದನ್ನು ಪ್ರತಿದಿನ ನೋಡುತ್ತಲೇ ಇದ್ದೇವೆ. ಹೀಗಿರುವಾಗಲೇ ಸೌಹಾರ್ದತೆ ಸಾರುವ ಘಟನೆಯೊಂದು ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.
ಹಾಸನದ ಬೇಲೂರಿನಲ್ಲಿ ವಾಸವಾಗಿದ್ದ ಮುಸ್ಲಿಂ ಕುಟುಂಬವೊಂದು 10 ವರ್ಷಗಳ ಜಮೀನು ಮಾರಾಟ ಮಾಡಿತ್ತು. ಆದರೆ, ಜಮೀನಿನಲ್ಲಿ ಇರುವ ಚೆನ್ನಕೇಶವ ದೇವರು ಕನಸಿನಲ್ಲಿ ಬಂದು ಪೂಜಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲೆ ಮುಸ್ಲಿಂ ಕುಟುಂಬ ಜಮೀನಿನ ಬಳಿ ಬಂದು ಪೂಜೆ ಸಲ್ಲಿಸಿದ್ದಾರೆ.
ಬೇಲೂರು ಪಟ್ಟಣದ ಕೆಂಪೇಗೌಡ ರಸ್ತೆಯ ದೀನ್ ದಯಾಳ್ ಬಾಡಾವಣೆಯಲ್ಲಿ ವಾಸವಿರುವ ಭಾಷಾಸಾಹೇಬ್ ಕುಟುಂಬ ದೇವರ ಕಾರ್ಯ ನೆರವೇರಿಸಿದೆ. ಸದ್ಯಕ್ಕೆ ಅರ್ಚಕರ ಬಳಿ ಪೂಜೆ ಮಾಡಿಸಿದ್ದು, ಮುಂದೆ ಅವರೇ ಪೂಜಾ ಕೈಂಕರ್ಯ ಮಾಡಿಕೊಂಡು ಹೋಗುವುದಾಗಿ ಹೇಳಿದ್ದಾರೆ.
ಪೂಜೆಯ ಬಳಿಕ ಭಾಷಾಸಾಹೇಬ್ ಕುಟುಂಬದ ಸದಸ್ಯರಿಗೆಲ್ಲ ಸ್ಥಳೀಯರು ಶಾಲು ಹೊದಿಸಿ ಸನ್ಮಾನಿಸಿ ಕಳಿಸಿಕೊಟ್ಟಿದ್ದಾರೆ. ಒಂದು ಕಡೆ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸಗಳಾಗುತ್ತಿದ್ದರೆ ಮತ್ತೊಂದು ಕಡೆ ಇಂತಹ ಬಾಂಧವ್ಯ ಬೆಸೆಯುವ ಕೆಲಸಗಳಾಗುತ್ತಿರುವುದು ನಿಜಕ್ಕೂ ಸಮಾಧಾನಕರ ಸಂಗತಿ.