ಉಳ್ಳಾಲ: ಮುಡಿಪು ಜಂಕ್ಷನ್ ಬಳಿ ಖಾಸಗಿ ಕಟ್ಟಡದಲ್ಲಿರುವ ಗಣೇಶ್ ಕಾಂಪ್ಲೆಕ್ಸ್ನಲ್ಲಿರುವ ಸಂಜೀವಿನಿ ಆಯುರ್ವೇದಿಕ್ ಮೆಡಿಕಲ್ ಶಾಪ್ ಎದುರುಗಡೆ ನಿಲ್ಲಿಸಿದ್ದ ಒಂದೇ ದ್ವಿಚಕ್ರ ವಾಹನಕ್ಕೆ 9,000 ರೂ ದಂಡ ವಿಧಿಸಲಾಗಿದ್ದು, ಪೊಲೀಸರು ಕಳುಹಿಸಿದ್ದ ಎಲ್ಲ ನೋಟಿಸ್ಗಳನ್ನು ಮಾಲಕಿ ಸ್ಟೋರ್ ಎದುರು ಪ್ರದರ್ಶನಕ್ಕಿಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಒಂದು ಕ್ಷಣ ನೋ ಪಾರ್ಕಿಂಗ್ ಸ್ಥಳದಲ್ಲಿ ಸ್ಕೂಟರ್ ನಿಲ್ಲಿಸಿದ್ದಕ್ಕೆ ಕೇಸು ಹಾಕುತ್ತಿದ್ದಾರೆ. ವರ್ಷದಲ್ಲಿ 16 ಬಾರಿ ಕೇಸ್ ದಾಖಲಾಗಿದ್ದು, ದಂಡದ ಮೊತ್ತ ಸುಮಾರು 9,000 ರೂ ದಾಟಿದೆ.
ಇನ್ನು ಕಳೆದ ವರ್ಷ ಸ್ಕೂಟರ್ ತಡೆದು ನಿಮ್ಮ ವಿರುದ್ಧ 5,000ರೂ ದಂಡವಿದೆ ಎಂದಿದ್ದರು. ದಂಡ ಪ್ರಯೋಗದ ಮಾಹಿತಿಯೇ ಇಲ್ಲದ ಮಾಲಕಿ ತನಗೇಕೆ ದಂಡ ಎಂದು ಕೇಳಿದಾಗ ನೋ ಪಾರ್ಕಿಂಗ್ ವಿಚಾರವನ್ನು ಟ್ರಾಫಿಕ್ ಪೊಲೀಸರು ಪ್ರಸ್ತಾಪಿಸಿದ್ದು. ತನಗೆ ಅದರ ಬಗ್ಗೆ ಏನು ಗೊತ್ತಿಲ್ಲ. ಕೇಸ್ ಬಗ್ಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಅವರು ಪೊಲೀಸರಲ್ಲಿ ಹೇಳಿದ್ದಾರೆ.
ನಂತರದಲ್ಲಿ ಅವರಿಗೆ ತಿಂಗಳಿಗೆ 500 ಮತ್ತು 1,000 ರೂಪಾಯಿ ದಂಡ ಪ್ರಯೋಗದ ಎರಡು ನೋಟಿಸುಗಳು ಬರಲಾರಂಭಿಸಿದ್ದು, ಈವರೆಗೆ 16 ನೋಟಿಸುಗಳು ಬಂದಿದೆ. ಅವೆಲ್ಲವನ್ನು ಮಾಲಕಿಯು ತನ್ನ ಮೆಡಿಕಲ್ ಶಾಪ್ ಎದುರುಗಡೆ ಸಾರ್ವಜನಿಕ ಪ್ರದರ್ಶನಕ್ಕಿಟ್ಟಿದ್ದಾರೆ.