ಮೂಡಬಿದ್ರಿ: ಸತ್ಯ ಸಂಗತಿ ಮರೆಮಾಚಿ ಗ್ರಾಮ ಪಂಚಾಯಿತಿ ವಿರುದ್ಧ ಸುಳ್ಳು ಆರೋಪ ಮಾಡಿ ಅರ್ಜಿ ಹೂಡಿದ್ದ ಖಾಸಗಿ ಕಂಪನಿಗೆ ಹೈಕೋರ್ಟ್ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಎಸ್.ಕೆ.ಎಫ್ ಬಾಯ್ಲರ್ ಆ್ಯಂಡ್ ಡ್ರೈಯರ್ಸ್ ಪ್ರೈ.ಲಿ. ಹೈಕೋರ್ಟ್ನಿಂದ ದಂಡನೆಗೆ ಒಳಗಾದ ಕಂಪನಿ. ದಕ್ಷಿಣ ಕನ್ನಡ ಜಿಲ್ಲೆಯ ಪಡುಮಾರ್ನಾಡ್ ಗ್ರಾಮ ಪಂಚಾಯಿತಿ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ಅರ್ಜಿದಾರ ಕಂಪನಿಯು ದಂಡದ ಮೊತ್ತವನ್ನು 4 ವಾರಗಳಲ್ಲಿ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸುವಂತೆ ಆದೇಶಿಸಿದೆ.
‘ಅರ್ಜಿದಾರ ಕಂಪನಿ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ತನ್ನ ಲೋಪ ಹಾಗೂ ಸತ್ಯಾಂಶ ಮುಚ್ಚಿಟ್ಟು ನ್ಯಾಯಾಂಗವನ್ನು ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸಿದೆ. ನ್ಯಾಯಾಂಗಕ್ಕೆ ಕಳಂಕ ತರುವ ಇಂತಹ ಪ್ರಯತ್ನಗಳನ್ನು ಕಠಿಣವಾಗಿ ಹತ್ತಿಕ್ಕಬೇಕೆಂದು ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ, ಭತ್ತ ಸಂಸ್ಕರಣೆಗೆ ಪರವಾನಿಗೆ ಪಡೆದು ಸ್ಪ್ರೇ ಪೇಂಟ್ ತಯಾರಿಕೆ ಮಾಡಿ ನಿಯಮ ಉಲ್ಲಂಘಿಘಿಸಿ ಪರಿಸರ ಮಾಲಿನ್ಯ ಮಾಡುತ್ತಿದ್ದ ಕಂಪನಿಯನ್ನು ಮುಚ್ಚುವಂತೆ ಗ್ರಾಮ ಪಂಚಾಯಿತಿ ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲಾಗದು’ ಎಂದು ತೀರ್ಪು ನೀಡಿದೆ.