ವೀರೇಂದ್ರ ಹೆಗ್ಗಡೆ ಅವರು ಗೋಲ್ ಗುಂಬಜ್ ಗೆ ಆಗಮಿಸಿದ್ದು, ಅಲ್ಲಿನ ಪ್ರವಾಸಿ ಮಾರ್ಗದರ್ಶಿಗಳು ಪ್ರವಾಸಿಗರನ್ನು ದೂರ ಹೋಗುವಂತೆ ಹೇಳುತ್ತಿದ್ದರು, ಇದನ್ನು ಕಂಡ ಹೆಗ್ಗಡೆಯವರು ಯಾರಿಗೂ ತಮ್ಮಿಂದ ತೊಂದರೆ ಆಗಬಾರದು ಎಂದು ಸಾಮಾನ್ಯರಂತೆ ಗೋಲಗುಂಬಜ ವೀಕ್ಷಣೆ ಮಾಡಿದ್ದಾರೆ.
ಗೋಲಗುಂಬಜ್ ಗೆ ಆಗಮಿಸುತ್ತಿದ್ದಂತೆ ವಿನ್ಯಾಸ ಕಂಡು ಅಚ್ಚರಿ ವ್ಯಕ್ತಪಡಿಸಿದರು. ಯಾರ ಸಹಾಯ ಇಲ್ಲದೇ ಯುವಕರಂತೆ ಗೋಲಗುಂಬಜ್ ಹತ್ತಿ ತಮ್ಮ ಮೊಬೈಲ್ ನಲ್ಲಿ ಚಿತ್ರ ಸೆರೆ ಹಿಡಿದುಕೊಂಡು ಸಂಭ್ರಮಿಸಿದರು.
ಈ ವೇಳೆ ಪ್ರವಾಸಿ ಮಾರ್ಗದರ್ಶಿಗಳಿಂದ ವಿಜಯಪುರದ ಇತಿಹಾಸ, ನಗರದಲ್ಲಿರುವ ಬೇರೆ ಸ್ಮಾರಕಗಳ ಬಗ್ಗೆ ಮಾಹಿತಿ ತಿಳಿದುಕೊಂಡರು. ಗೋಡೆಯ ಗ್ಯಾಲರಿಯ ಕಿಂಡಿಗಳಿಂದ ಹೊರ ಹೊಮ್ಮುವ ಪಿಸು ಮಾತು ಸಹ ಕೇಳಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, ಬಾಲ್ಯದಲ್ಲಿ ವಿಜಯಪುರಕ್ಕೆ ಭೇಟಿ ನೀಡಿರುವ ನೆನಪುಗಳನ್ನು ಮೆಲಕು ಹಾಕಿಕೊಂಡರು. ಆದ ಒಳಗೆ ಬರುತ್ತಿದ್ದಂತೆ ಸಪ್ತಧ್ವನಿ ಕೇಳಿ ಸಂಭ್ರಮಿಸಿದ್ದೆ ಎಂದು ಹೇಳಿದರು.
ತಮಗೆ ವಿಜಯಪುರದ ವೈಶಿಷ್ಯ ಮತ್ತು ಇತಿಹಾಸದ ವಿವರಣೆ ನೀಡಿದ ಮಾರ್ಗದರ್ಶಿ ರಾಜಶೇಖರ್ ಎಂಬವರನ್ನು ಶ್ಲಾಘಿಸಿದರು. ನಂತರ ಶ್ರೀಮಠದ ಶಾಲು ನೀಡಿ ಗೌರವಿಸಿದರು. ಇನ್ನು ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು ಹೆಗ್ಗಡೆ ಅವರ ಸರಳತೆ ಕಂಡು ಮೂಕವಿಸ್ಮಿತರಾದರು.