ಕಾರ್ಕಳ : ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕ ವಿರುದ್ಧ ಕಾರ್ಕಳ ಎರಡನೇ ಹೆಚ್ಚುವರಿ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಚೇತನಾ ಎಸ್.ಎಫ್ ತೀರ್ಪು ನೀಡಿ ಶಿಕ್ಷೆ ಪ್ರಮಾಣವನ್ನು ವಿಧಿಸಿದ್ದಾರೆ.
ಉಡುಪಿಯಿಂದ ಹೆಬ್ರಿ ಕಡೆಗೆ ಸಾಗುತ್ತಿದ್ದ ಕೆಎ 20 ಇಎಲ್ 2300 ನಂಬ್ರದ ಬೈಕ್ಗೆ 2017 ಡಿಸೆಂಬರ್ 2ರ ಅಪರಾಹ್ನ 3.15ರ ಸುಮಾರಿಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನಿವಾಸಿ ಅಭಿಷೇಕ್ ಕುಮಾರ್(22) ಚಲಾಯಿಸಿಕೊಂಡು ಬರುತ್ತಿದ್ದ ಕೆಎ 07 ಎಂ 3272 ನಂಬ್ರದ ಕಾರು ಹೆಬ್ರಿಯ ಕನ್ಯಾನ ಎಂಬಲ್ಲಿ ಡಿಕ್ಕಿ ಹೊಡೆದಿತ್ತು.ರಸ್ತೆಯಲ್ಲಿ ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ಚಲಾಯಿಸಿ ರಸ್ತೆಯ ಬಲಬದಿಯಲ್ಲಿ ಹಾದು ಹೋಗಿರುವುದು ಘಟನೆಗೆ ಕಾರಣವಾಗಿತ್ತು. ಇದರ ಪರಿಣಾಮವಾಗಿ ಬೈಕ್ ಸವಾರ ಪೆರ್ಡೂರಿನ ಪ್ರವೀಣ್ ಪೂಜಾರಿ ಡಾಂಬರು ರಸ್ತೆಗೆ ಬಿದ್ದು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದರು.ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆದಲ್ಲಿ ಅವರು ಮೃತಪಟ್ಟಿದ್ದರು. ಈ ಕುರಿತು ಅಂದು ಹೆಬ್ರಿ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ನ್ಯಾಯಾಲಯವು 7 ಮಂದಿ ಸಾಕ್ಷಿದಾರ ಹೇಳಿಕೆಯನ್ನು ಪ್ರಕರಣಕ್ಕೆ ಸಂಬಂಧಿಸಿ ಸಂಗ್ರಹಿಸಿತು.ಆರೋಪಿಯ ವಿರುದ್ಧ ಹೇರಲಾದ ಕಲಂ 279,304 (ಎ) ಯಡಿಯಲ್ಲಿ ಆರೋಪಿ ಎಸಗಿರುವ ಕೃತ್ಯಕ್ಕೆ ಸಂಬಂಧಿಸಿದಂತೆ ಅಪರಾಧಿ ಎಂದ ನ್ಯಾಯಾಧೀಶರು ಕಲಂ 279ರಡಿಯಲ್ಲಿ ಅಪರಾಧಿ ಕೃತ್ಯಕ್ಕೆ 1,000 ದಂಡ ತಪ್ಪಿದಲ್ಲಿ ಒಂದು ತಿಂಗಳ ಸದಾಶಿಕ್ಷೆ. ಕಲಂ 304 ಭಾರತ ಐಪಿಸಿ ಪ್ರಕಾರ ಅಪರಾಧ ಕೃತ್ಯಕ್ಕೆ ಸಂಬಂಧಿಸಿದಂತೆ 6 ತಿಂಗಳ ಕಾಲ ಸಜೆ ಮತ್ತು 5 ಸಾವಿರ ದಂಡ ವಿಧಿಸಲಾಗಿದೆ. ದಂಡ ವಿಧಿಸಲು ತಪ್ಪಿದಲ್ಲಿ ಮತ್ತೇ 2 ತಿಂಗಳ ಸದಾಸಜೆ ತೀರ್ಪು ಘೋಷಿಸಿ ಶಿಕ್ಷೆಯನ್ನು ವಿಧಿಸಿದ್ದಾರೆ.


