ಮಂಗಳೂರು: ಮಂಗಳೂರಿನಲ್ಲಿ ಮ್ಯಾಗ್ನಮ್ ಇಂಟರ್ ಗ್ರಾಫಿಕ್ಸ್ ಹೆಸರಲ್ಲಿ ಜಾಹೀರಾತು ಸಂಸ್ಥೆ ಸ್ಥಾಪಿಸಿ, ದೇಶದ ಹಲವೆಡೆ ಕಚೇರಿಗಳನ್ನು ಆರಂಭಿಸಿ ಒಂದು ಕಾಲದಲ್ಲಿ ಮಿಂಚು ಹರಿಸಿದ್ದ ಸುಧೀರ್ ಘಾಟೆ(64) ಇಂದು ತಮ್ಮ ಮನೆಯಲ್ಲಿ ನಿಧನ ಹೊಂದಿದ್ದಾರೆ.
1992 ರಲ್ಲಿ ಜಾಹೀರಾತು ಸಂಸ್ಥೆ,’ ಮ್ಯಾಗ್ನಮ್ ಇಂಟರ್ ಗ್ರಾಫಿಕ್ಸ್’ ಕಟ್ಟಿ ಬೆಳೆಸಿದ್ದ ಸುಧೀರ್ ಘಾಟೆ ಮಂಗಳೂರಿನ ಪ್ರಸಿದ್ಧ ಉದ್ಯಮಿಯಾಗಿದ್ದರು. 500 ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದ ಇವರು ಆರ್ ಎಸ್ಎಸ್ ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ತನ್ನ ವೃತ್ತಿ ಜೀವನವನ್ನು ಆರಂಭಿಸಿದ್ದರು. ಸುಧೀರ್ ಘಾಟೆ 1995ರಲ್ಲಿ ರಾಜ್ಯ ಬಿಜೆಪಿಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಕಟ್ಟಿದ್ದು, ಬಿ ಎಂಎಸ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿವಂಗತ ಪ್ರಭಾಕರ್ ಘಾಟೆ- ಶಾರದಾ ಘಾಟೆ ದಂಪತಿ ಪುತ್ರರಾದ ಸುಧೀರ್ ಪಿಆರ್ ಐಎಸ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಅಟಲ್ ಬಿಹಾರಿ ವಾಜಪೇಯಿ, ಸುಷ್ಮಾ ಸ್ವರಾಜ್, ಲಾಲ್ ಕೃಷ್ಣ ಆಡ್ವಾಣಿ, ಮುರಳಿ ಮನೋಹರ್ ಜೋಷಿ ಸೇರಿ ರಾಜ್ಯದ ಹಿರಿಯ ಬಿಜೆಪಿ ನಾಯಕರ ಒಡನಾಟ ಸುಧೀರ್ ಘಾಟೆಯವರಿಗಿತ್ತು.ಒಂದು ಕಾಲದಲ್ಲಿ ಜಾಹೀರಾತು ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೆ ಕಾರಣವಾಗಿದ್ದ ಮ್ಯಾಗ್ನಮ್ ಸಂಸ್ಥೆ ಆನಂತರ ನಷ್ಟದ ಕಾರಣದಿಂದ ಮುಚ್ಚಿ ಹೋಗಿತ್ತು. ಆಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದ ಸುಧೀರ್ ಘಾಟೆಯವರು ತಮ್ಮ ಕೊಡಿಯಾಲಬೈಲಿನ ಮನೆಯಲ್ಲಿ ಉಳಿದುಕೊಂಡಿದ್ದರು. ಐದಾರು ವರ್ಷಗಳಿಂದ ಮನೆಯಲ್ಲಿದ್ದೇ ಚಿಕಿತ್ಸೆ ಪಡೆಯುತ್ತಿದ್ದರು. ಘಾಟೆಯವರು ಪತ್ನಿ, ಪುತ್ರ ಪ್ರಾಂಜಲ ಘಾಟೆ, ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ


