ಪುತ್ತೂರು: ಪುತ್ತೂರಿನ ಬೈಪಾಸ್ ರಸ್ತೆಯ ಹೋಟೆಲ್ ರೆಸ್ಟೋರೆಂಟ್ನಲ್ಲಿ ಕಳೆದ ಮೂರು ದಿನಗಳಿಂದ ಹಿಂದೂ ಯುವತಿಯೋರ್ವಳು ತಂಗಿದ್ದ ರೂಮ್ ನಲ್ಲಿ ಓರ್ವ ಹಿಂದೂ ಯುವಕ ಮತ್ತು ಮುಸ್ಲಿಂ ಯುವಕನಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂ ಯುವತಿ ಕಳೆದ ಮೂರು ದಿನಗಳಿಂದ ಬೈಪಾಸ್ ರಸ್ತೆಯ ಹೋಟೆಲ್ ರೆಸ್ಟೋರೆಂಟ್ನಲ್ಲಿ ತಂಗಿದ್ದು, ಅದೇ ರೂಮ್ನಲ್ಲಿ ಓರ್ವ ಹಿಂದೂ ಯುವಕ ಮತ್ತು ಮುಸ್ಲಿಂ ಯುವಕನೋರ್ವ ಇರುವ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹೋಟೆಲ್ಗೆ ತೆರಳಿದ್ದಾರೆ. ಯುವತಿ ಮತ್ತು ಇಬ್ಬರು ಯುವಕರು ಅಲ್ಲಿನ ರೆಸ್ಟೋರೆಂಟ್ನಲ್ಲಿ ಉಪಹಾರ ಸೇವಿಸುತ್ತಿದ್ದು, ಇದೇ ಸಂದರ್ಭ ಪೊಲೀಸರೂ ಸ್ಥಳಕ್ಕೆ ಅಗಮಿಸಿ ಯುವತಿ ಮತ್ತು ಜೊತೆಗಿದ್ದ ಇಬ್ಬರು ಯುವಕರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಅವರು ಯುವತಿ ಸೇರಿದಂತೆ ಮೂವರನ್ನೂ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪುತ್ತೂರಿನ ವಸತಿಗೃಹಕ್ಕೆ ಹೊರಗಡೆಯಿಂದ ಬರುವವರಲ್ಲಿ ಅವರ ಆಧಾರ್ ಕಾರ್ಡ್ ಆಧಾರದಲ್ಲಿ ವಿಳಾಸ ದಾಖಲಿಸುತ್ತಿಲ್ಲ ಎಂಬ ಮಾಹಿತಿ ಇದೆ. ಎಲ್ಲಾ ವಸತಿ ಗೃಹಗಳಿಗೆ ತಂಗಲು ಬರುವ ಗ್ರಾಹಕರ ಸರಿಯಾದ ದಾಖಲೆ ಇಟ್ಟುಕೊಳ್ಳುವಂತೆ ಮತ್ತು ಪೊಲೀಸರು ಈ ಕುರಿತು ಆಗಾಗ ಪರಿಶೀಲನೆ ಮಾಡಬೇಕೆಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಜಿತ್ ಹೊಸಮನೆ ತಿಳಿಸಿದ್ದಾರೆ.