ಪುತ್ತೂರು: ಇತ್ತೀಚಿಗಷ್ಟೇ ಸ್ಯಾಟಲೈಟ್ ಫೋನ್ ಕರೆ ಸದ್ದು ಮಾಡಿ ಜನರ ನಿದ್ದೆಗೆಡಿಸಿದ್ದ ಪ್ರಕರಣದಂತೆ ಇದೀಗ ಉಪ್ಪಿನಂಗಡಿಯಿಂದ ಮತ್ತೊಂದು ಭಯೋತ್ಪಾದನೆ ಕುರಿತಾಗಿ ಹೊಸದೊಂದು ಮಾಹಿತಿ ಲಭಿಸಿದೆ.
ಒಂದೂವರೆ ತಿಂಗಳುಗಳ ಹಿಂದೆ ನಾಪತ್ತೆಯಾಗಿದ್ದ ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮ ನಿವಾಸಿಯೊಬ್ಬರಿಗೆ ಇದೀಗ ಉಗ್ರ ಚಟುವಟಿಕೆಯ ನಂಟಿದೆ ಎಂದು ಹೇಳಲಾಗುತ್ತಿದೆ. ನವರಾತ್ರಿ ಉತ್ಸವದ ಸಂದರ್ಭದಲ್ಲಿ ದೇಶಾದ್ಯಂತ ಬಾಂಬ್ ಸ್ಪೋಟಕ್ಕೆ ಸಂಚು ರೂಪಿಸಿದ ಭಯೋತ್ಪಾದಕರ ಪೈಕಿ ಆತನೂ ಓರ್ವನೆ೦ಬ ಮಾಹಿತಿ ವಿಶ್ವಸನೀಯ ಮೂಲಗಳಿಂದ ಲಭಿಸಿದೆ ಎಂದು ಹೇಳಲಾಗಿದೆ.
ಪೊಲೀಸರು ನಾಪತ್ತೆ ದೂರಿಗೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದಂತೆಯೇ ನಾಪತ್ತೆಯಾದ ವ್ಯಕ್ತಿ ಶಂಕಿತ ಭಯೋತ್ಪಾದಕನೆಂಬ ಮಾಹಿತಿ ಹೊರಬಿದ್ದಿದೆ. ದೆಹಲಿ ವಿಶೇಷ ಪೊಲೀಸ್ ತಂಡದ ವಶದಲ್ಲಿರುವ ಆರು ಶಂಕಿತ ಭಯೋತ್ಪಾದಕರ ಪೈಕಿ ಈತನೂ ಓರ್ವನಾಗಿದ್ದಾನೆ ಎಂಬುದು ತಿಳಿದುಬಂದಿರುವುದಾಗಿ ದೈನಿಕ ಪತ್ರಿಕೆಯೊಂದು ವರದಿ ಮಾಡಿದೆ.
ಕಳೆದ ಜು.28ರಿಂದ ನಾಪತ್ತೆಯಾಗಿರುವ ಬಗ್ಗೆ ಆತನ ನೆಕ್ಕಿಲಾಡಿಯ ಪತ್ನಿ ಕಳೆದ ಆಗಸ್ಟ್ ಮೊದಲ ವಾರದಲ್ಲಿ ಪೊಲೀಸರಿಗೆ ದೂರು ನೀಡಿದ್ದಳು. ಜು.18ರಂದು ವಾಹನಗಳ ಬಿಡಿಭಾಗಗಳನ್ನು ಖರೀದಿಸಲಿದೆ ಎಂದು ಬೆಂಗಳೂರಿಗೆ ಹೋಗಿದ್ದ ಈತ ಜು.18 ರಂದು ರಾತ್ರಿ ಪತ್ನಿಗೆ ಫೋನಾಯಿಸಿ ಊರಿಗೆ ಹಿಂತಿರುಗಿ ಬರುತ್ತಿದ್ದೇನೆಂದು ತಿಳಿಸಿರುತ್ತಾನೆಂದೂ ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದೂ ದೂರಿನಲ್ಲಿ ತಿಳಿಸಲಾಗಿತ್ತು. 48 ವರ್ಷದ ವ್ಯಕ್ತಿ ಶಂಕಿತ ಭಯೋತ್ಪಾದಕ ಉಪ್ಪಿನಂಗಡಿಯಲ್ಲಿ ಗ್ಯಾರೇಜ್ ಹೊಂದಿದ್ದು, ಉತ್ತರ ಪ್ರದೇಶ ಮೂಲದ ನಿವಾಸಿ ಎಂದು ಹೇಳಲಾಗುತ್ತಿದೆ.
ನಾಪತ್ತೆಯಾಗಿದ್ದ ವ್ಯಕ್ತಿ ಆಕೆಯನ್ನು 2019 ರಲ್ಲಿ ಎರಡನೇ ವಿವಾಹವಾಗಿದ್ದು, ಈತ ನೆಕ್ಕಿಲಾಡಿಯ ರಾಘವೇಂದ್ರ ಮಠ ಬಳಿ ಗ್ಯಾರೇಜ್ ನಡೆಸಿಕೊಂಡಿದ್ದ. ನೆಕ್ಕಿಲಾಡಿಯ ಖಾಸಗಿ ಅಪಾರ್ಟ್ಮೆಂಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿರುವುದಾಗಿ ಈಕೆ ತಿಳಿಸಿದ್ದಾಳೆ.
ಹೆಚ್ಚಾಗಿ ಹಿ೦ದೂಗಳೊಂದಿಗೆ ಬೆರೆಯುತ್ತಿದ್ದ ಈತನ ಮೊಬೈಲ್ನಲ್ಲಿ ಆರ್ಎಸ್ಎಸ್ ಸರಸಂಘ ಚಾಲಕ್ ಮೋಹನ್ ಜೀ ಭಾಗವತ್ ಕಾರ್ಯ ಚಟುವಟಿಕೆಯ ಕ್ಲಿಪ್ಗಳು ಯಥೇಚ್ಛ ಇದ್ದವು ಎಂದು ಹೇಳಲಾಗಿದೆ.
ಸ್ಥಳೀಯರಲ್ಲಿ ಆರ್ಎಸ್ಎಸ್ನ ಮುಸ್ಲಿಂ ಮಂಚ್ ಬಗ್ಗೆ ತನಗೆ ಒಲವು ಇದೆ ಎಂದೂ, ಅದಕ್ಕಾಗಿ ನನ್ನನ್ನೂ ಆರ್ಎಸ್ಎಸ್ ಗೆ ಸೇರಿಸಿ ಎಂದೂ ಅಂಗಲಾಚುತ್ತಿದ್ದ.ಯಾರಾದರೂ ಮುನಿಸಿಕೊಂಡು ಬೈದರೆ ಅತ್ತು ಎಲ್ಲರ ಕರುಣೆಗೆ ಪಾತ್ರನಾಗುತ್ತಿದ್ದ ಎಂಬುದು ತಿಳಿದು ಬಂದಿದೆ.
ಎದೆ ನೋವು ಕಾಡಿ ಅಸ್ವಸ್ಥನಾಗಿದ್ದ ಆತನನ್ನು ಹಿಂದೂ ಸ್ನೇಹಿತರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದ್ದರು. ಆದರೆ ಬಿಲ್ ಪಾವತಿಸುವ ವೇಳೆ ತನ್ನ ಬ್ಯಾಂಕ್ ಖಾತೆಗೆ 1.75 ಲಕ್ಷ ರು. ಹಣ ಜಮಯಾಗಿರುವುದನ್ನು ತಿಳಿಸಿದ್ದಾನೆ ಅಲ್ಲದೆ ಆ ಮೊತ್ತವನ್ನು ಆನ್ಲೈನ್ ಆಟದಿಂದ ಸಂಪಾದಿಸಿದ್ದನೆಂದು ಹೇಳಿಕೊಂಡಿದ್ದಾನೆ. ನಾಪತ್ತೆಯಾಗುವ ಮುನ್ನ ನೆಕ್ಕಿಲಾಡಿಯಲ್ಲಿದ್ದ ಸಮಯದಲ್ಲಿ ಭಾರಿ ಮೊತ್ತದ ಹಣದ ಕಟ್ಟನ್ನು ಅತ ಹೊಂದಿರುವುದನ್ನು ಸ್ಥಳೀಯರು ಗಮನಿಸಿದ್ದರೂ ಹಣದ ಲಭ್ಯತೆ ಎಲ್ಲಿಂದ ಎನ್ನುವುದು ಯಾರಿಗೂ ತಿಳಿದಿರಲಿಲ್ಲ.
ಆತನಿಗೆ ಮದುವೆಯನ್ನೂ ಮಾಡಿಸಿದ ಸಾರ್ವಜನಿಕರು ಆತನಿಗೆ ಅಗತ್ಯ ದಾಖಲೆಗಳನ್ನು ಒದಗಿಸುವಲ್ಲಿಯೂ ನೆರವಾಗಿದ್ದರು. ಆಯ್ದ ಫೋನ್ ಕರೆಗಳಿಗೆ ಉತ್ತರಿಸುವಾಗ ಅರ್ಥವಾಗದ ವಿಚಿತ್ರ ಭಾಷೆಯನ್ನು ಬಳಸುತ್ತಿದ್ದ ಬಗ್ಗೆಯೂ ಹಾಗೂ ಆಯ್ದ ಫೋನ್ ಕರೆಗಳಿಗೆ ಸಂಧಿಸಿ ಸ್ಥಳದಲ್ಲಿ ನಿಲ್ಲದೆ ಸಂಚರಿಸುತ್ತಲೇ ಮಾತನಾಡುತ್ತಿದ್ದ ನಡೆಯನ್ನು ಗಮನಿಸಿ ಸಂಶಯಿಸಿದ ಆತನ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತಾದರೂ ಪೊಲೀಸರು ಆತನನ್ನು ಕರೆಯಿಸಿದ ವೇಗದಲ್ಲಿಯೇ ಹಿಂದಕ್ಕೆ ಕಳುಹಿಸಿ ತನಿಖೆಯನ್ನು ಪೂರ್ಣಗೊಳಿಸಿದ್ದರು.
ಒಟ್ಟಾರೆ ಕಣ್ಮರೆಯಾಗುವವರೆಗೂ ಸಜ್ಜನನಂತೆ ನಟಿಸುತ್ತಾ ಪ್ರತಿಯೊಂದು ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದ ಈತನೊಂದಿಗೆ ವ್ಯವಹರಿಸಲು ಸ್ಥಳೀಯರಿಗೆ ಪರಿಚಯವಿಲ್ಲದ ಕೆಲ ಮಂದಿಗಳು ಪದೇ ಪದೇ ಬರುತ್ತಿದ್ದ ಮಾಹಿತಿಗಳೂ ದೊರಕಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಿಂದಿ ಹಾಗೂ ಉರ್ದುವನ್ನು ಸಾಮಾನ್ಯವಾಗಿ ಮಾತನಾಡುತ್ತಿದ್ದ ಈತ ನಿರ್ದಿಷ್ಟ ಪೋನ್ ಕರೆಗೆ ಮಾತ್ರ ಸ್ಥಳೀಯರು ಈ ತನಕ ಕೇಳದ ಭಾಷೆಯಲ್ಲಿ ಮಾತನಾಡುತ್ತಿದ್ದ. ಆಯ್ದ ಫೋನ್ ಕರೆಗಳನ್ನು ಉತ್ತರಿಸುವಾಗ ಕಾರ್ಯಕ್ಷೇತ್ರದಲ್ಲಿ ನಿಲ್ಲದೆ ಹೆದ್ದಾರಿಯುದ್ದಕ್ಕೂ ನಡೆದುಕೊಂಡು ಮಾತುಕತೆ ನಡೆಸುತ್ತಿದ್ದ ಎಂಬುದು ತಿಳಿದು ಬಂದಿದೆ.