ಬೆಳ್ತಂಗಡಿ: ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಬೀಗ ಒಡೆದು ಕಳ್ಳತನ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಮಾಡಂಕಲ್ಲು ಎಂಬಲ್ಲಿ ನಡೆದಿದೆ.
ಗಣೇಶ್ ಗೌಡ ಎಂಬುವವರು ಸೆ.8 ರಂದು ಹೆಂಡತಿ ಹಾಗೂ ಮಕ್ಕಳನ್ನು ಕರೆದುಕೊಂಡು ಹೆಂಡತಿ ಮನೆಯಾದ ಬೆಳ್ತಂಗಡಿ ತಾಲೂಕು ಕಿಲ್ಲೂರು ಗ್ರಾಮದ ಬಂಗಾಡಿ ಎಂಬಲ್ಲಿಗೆ ಹೋಗಿದ್ದು, ಈ ವೇಳೆ ತಾಯಿಯನ್ನು ಪಕ್ಕದ ಮನೆಯ ಚಂದಪ್ಪರವರ ಮನೆಯಲ್ಲಿ ಮಲಗುವಂತೆ ತಿಳಿಸಿ ಹೋಗಿದ್ದಾರೆ. ಅದರಂತೆ ತಾಯಿ ರಾತ್ರಿ 7.00 ಗಂಟೆಗೆ ಮನೆಗೆ ಬೀಗ ಹಾಕಿ ಚಂದಪ್ಪರವರ ಮನೆಗೆ ಹೋಗಿದ್ದು, ಮರುದಿನ ಬೆಳಿಗ್ಗೆ 07.30 ಕ್ಕೆ ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲಿನ ಬೀಗ ಮುರಿದಿರುವುದು ಬೆಳಕಿಗೆ ಬಂದಿದೆ.
ಒಳಗೆ ಹೋಗಿ ನೋಡಿದಾಗ ಕೋಣೆಯಲ್ಲಿದ್ದ ಕಪಾಟಿನ ಬೀಗವನ್ನು ಯಾವುದೋ ಆಯುಧದಿಂದ ಮುರಿದು, ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಪಾಟಿನ ಒಳಗೆ ಇಟ್ಟಿದ್ದ 6 ಪವನ ಚಿನ್ನವನ್ನು ಕಳವು ಮಾಡಿದ್ದಾರೆ. ಒಟ್ಟು 1,75,000 ರೂ ಮೌಲ್ಯದ ಚಿನ್ನಾಭರಣ ಕಳವಾಗಿರಬಹುದು ಎಂದು ಅಂದಾಜಿಸಲಾಗಿದೆ .
ಸದ್ಯ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳಾದ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ವೆಲಂಟೈನ್ ಡಿಸೋಜಾ ,ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವ ಕುಮಾರ,ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಕೃಷ್ಣಕಾಂತ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.