ಮಂಗಳೂರು: ಹವಾಮಾನ ವೈಪರೀತ್ಯದಿಂದಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಬಿಸಿಲು- ಮಳೆಯ ಜೋಡಾಟ ಕಂಡುಬರುತ್ತಿದ್ದು ಸಾಂಕ್ರಾಮಿಕ ರೋಗಗಳ ಆತಂಕ ಎದುರಾಗಿದೆ. ಈಗಾಗಲೇ ವೈರಲ್ ಜ್ವರ , ಶೀತ, ನೆಗಡಿಯಂತಹ ಸಮಸ್ಯೆಗಳಿಂದ ಹಲವರು ಬಳಲುತ್ತಿದ್ದು, ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಮಲೇರಿಯಾ, ಡೆಂಗ್ಯೂ ಮಾತ್ರವಲ್ಲದೆ ಇತರ ವೈರಲ್ ಜ್ವರದ ಪ್ರಮಾಣ ಹೆಚ್ಚಳವಾಗುವ ಭೀತಿ ಇದೆ.
ಪುತ್ತೂರು, ಕಡಬ, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಡೆಂಗ್ಯೂ ಜಾಸ್ತಿ ಇದ್ದರೆ, ಮಂಗಳೂರು ನಗರ ದಲ್ಲಿ ಮಲೇರಿಯಾ ಜಾಸ್ತಿ ಇದೆ. ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಡೆಂಗ್ಯೂ ತೀವ್ರತೆ ಹೆಚ್ಚು. ನಿಂತ ನೀರಿನಲ್ಲಿ ಕೇವಲ 7 ದಿನಗಳೊಳಗೆ ಸೊಳ್ಳೆಗಳು ಮೊಟ್ಟೆ ಇಟ್ಟು, ಮರಿಗಳಾಗಿ (ಲಾರ್ವಾ) ಬಳಿಕ ಸೊಳ್ಳೆಗಳಾಗಿ ಬೆಳವಣಿಗೆ ಹೊಂದುತ್ತವೆ. ಮಲೇರಿಯಾ ಮತ್ತು ಡೆಂಗ್ಯೂ ಸೊಳ್ಳೆಗಳು ಶುದ್ಧ ನೀರಿನಲ್ಲಿ ಉತ್ಪತ್ತಿ ಆಗುತ್ತವೆ. ಮಲೇರಿಯಾ ಸೊಳ್ಳೆ ರಾತ್ರಿ ವೇಳೆ, ಡೆಂಗ್ಯೂ ಹರಡುವ ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ.
ಮುನ್ನೆಚ್ಚರಿಕೆ ಕ್ರಮಗಳು :
ಸೊಳ್ಳೆ ಉತ್ಪತ್ತಿಯ ತಾಣಗಳಾಗಿರುವ ಪ್ಲಾಸ್ಟಿಕ್, ಬಾಟಲಿ, ಎಳನೀರು ಚಿಪ್ಪು, ಮಡಕೆ, ಬಕೆಟ್, ಪಾತ್ರೆ, ಹಳೆ ಟೈರ್, ಟರ್ಪಾಲು ಇತ್ಯಾದಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಡೆಂಗ್ಯೂ ಸೊಳ್ಳೆಯ ಮೊಟ್ಟೆ ಒಂದು ವರ್ಷ ಜೀವಂತವಾಗಿರುತ್ತದೆ. ನೀರಿನ ಆಶ್ರಯ ಅಥವಾ ಅನುಕೂಲಕರ ವಾತಾವರಣ ಸೃಷ್ಟಿಯಾದಾಗ ಮರಿಯಾಗುತ್ತದೆ. ಆದ್ದರಿಂದ ಪಾತ್ರೆ, ಬಾಟಲಿ, ಮಡಕೆ ಇತ್ಯಾದಿಗಳನ್ನು ಮುಚ್ಚಿ ಇಡುವುದರ ಜತೆಗೆ ಸ್ವತ್ಛವಾಗಿಯೂ ಇರಿಸಬೇಕು.
ಯಾವುದೇ ಜ್ವರ ಬಂದರೂ ಮೊದಲು ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಲೇರಿಯಾ/ ಡೆಂಗ್ಯೂಗೆ ರಕ್ತ ಪರೀಕ್ಷೆ ಹಾಗೂ ಕೊರೊನಾಕ್ಕೆ ಸ್ವಾಬ್ (ಗಂಟಲ ದ್ರವ) ಪರೀಕ್ಷೆ. ಬಿಟ್ಟು ಬಿಟ್ಟು ಮಳೆ ಬರುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಜನರಲ್ಲಿ ವಿವಿಧ ಜ್ವರ ಕಾಣಿಸಿಕೊಳ್ಳುತ್ತಿದೆ. ಆರೋಗ್ಯ ಇಲಾಖೆಯಿಂದ ಮಾತ್ರ ಸೊಳ್ಳೆಗಳ ನಿಯಂತ್ರಣ ಸಾಧ್ಯವಾಗದು; ಜನರಿಗೂ ಜವಾಬ್ದಾರಿ ಇದ್ದು, ಮನೆ, ಕಟ್ಟಡಗಳ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿ ಕೊಳ್ಳಬೇಕಾಗಿದೆ.