ಸುಳ್ಯ: ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳ ಜೊತೆ ಯುವಕನೊಂದಿಗೆ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಂಜೆ ಸುಳ್ಯ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಪತಿಯೊಂದಿಗೆ ತೆರಳಲು ನಿರಾಕರಿಸಿರುವುದಾಗಿ ತಿಳಿದುಬಂದಿದೆ.
ಸುಳ್ಯ ಪೊಲೀಸ್ ಠಾಣೆಗೆ ಆಕೆಯ ಪತಿ ಮನೋಜ್ ರವರು ದೂರು ನೀಡಿದ ಹಿನ್ನಲೆಯಲ್ಲಿ ಸುಳ್ಯ ಠಾಣಾ ಉಪನಿರೀಕ್ಷಕರು ಯುವಕ ಹಾಗೂ ಮಹಿಳೆಯನ್ನು ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಜಯನಗರ ಕೊಯಿಂಗೋಡಿ ಸಮೀಪದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಸಂಬಂಧಿಕರೆಂದು ಮನೆಗೆ ಬರುತ್ತಿದ್ದ ಯುವಕನೊಂದಿಗೆ ಪರಾರಿಯಾಗಿದ್ದರು.
ಸೋಮವಾರ ಸಂಜೆ ಮಹಿಳೆ ಮಾತ್ರ ಠಾಣೆಗೆ ಹಾಜರಾಗಿ ಪೊಲೀಸರ ಮುಂದೆ ನಾನು ಮುಂದೆ ಯುವಕನೊಂದಿಗೆ ಬಾಳುವ ನಿರ್ಧಾರ ಹೊಂದಿದ್ದು, ಅವರೊಂದಿಗೆ ಇರುತ್ತೇನೆಂದು ಹೇಳಿಕೆ ನೀಡಿದ್ದಾರೆ. ಪತ್ನಿ ಬಂದ ವಿಷಯ ತಿಳಿದ ಪತಿ ಸೇರಿದಂತೆ ಮನೆಯವರು ಠಾಣೆಗೆ ಮಾತುಕತೆಗೆಂದು ಬಂದಿದ್ದರು. ಆದರೆ ಇವರ ಮಾತನ್ನು ಕೇಳದ ಮಹಿಳೆ ನನಗೆ ನನ್ನ ಗಂಡ ಹೊಡೆಯುತ್ತಿದ್ದು, ಅವರೊಂದಿಗೆ ನಾನು ಬಾಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ವಿಚ್ಛೇಧನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಹಾಕುವುದಾಗಿ ತಿಳಿಸಿ, ಅಲ್ಲಿಂದ ತೆರಳಿದ್ದಾರೆ ಎಂದು ಹೇಳಲಾಗಿದೆ.
ಮಹಿಳೆ ಸಹಕಾರಿ ಸಂಸ್ಥೆಗಳಿಂದ ಸಾಲ ಪಡೆದಿದ್ದು, ಸಾಲ ಪಡೆದಿರುವ ಗುಂಪಿನ ಸದಸ್ಯರುಗಳು ಠಾಣೆಗೆ ಬಂದು ಸಂಧ್ಯಾರವರನ್ನು ಕಾಯುತ್ತಿದ್ದರು. ಮಹಿಳೆಯ ವಿಚಾರಣೆ ಮುಗಿದು ಹೊರಬರುವ ತನಕ ಕಾದ ಮಹಿಳಾ ಸದಸ್ಯರು 2 ಗಂಟೆಯ ಬಳಿಕ ಠಾಣೆಯಿಂದ ಹೊರ ಬಂದ ಮಹಿಳೆಯೊಂದಿಗೆ ಸಂಘದಿಂದ ಸಾಲ ಪಡೆದ ಹಣ ನೀಡುವ ಕುರಿತು ಮಾತಿನ ಚಕಮಕಿ ನಡೆಸಿದ್ದಾರೆ. ಅದಕ್ಕೆ ಅವರು ಕಚೇರಿಗೆ ಹೋಗಿ ಹಣ ನೀಡುವ ಕುರಿತು ಮಾತಿನಚಕಮಕಿ ನಡೆಸಿದರೆಂದು ಅದಕ್ಕೆ ಅವರು ಕಚೇರಿಗೆ ಹೋಗಿ ಇದನ್ನು ಸರಿ ಪಡಿಸುತ್ತೇನೆಂದು ಹೇಳಿದರೆನ್ನಲಾಗಿದೆ. ಈ ಎಲ್ಲಾ ಘಟನೆಯ ಬಳಿಕ ಠಾಣೆಗೆ ಬಂದಿದ್ದ ಮಹಿಳೆಯ ಗಂಡ ಮತ್ತು ಮನೆಯವರು ನ್ಯಾಯಾಲಯದ ಮೊರೆ ಹೋಗಿ ನ್ಯಾಯಕ್ಕಾಗಿ ಮನವಿಯನ್ನು ಸಲ್ಲಿಸುತ್ತೇವೆಂದು ಸ್ಥಳೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.