Saturday, June 13, 2026
Homeಕರಾವಳಿಮಂಗಳೂರು: ಅಫ್ಗಾನಿಸ್ತಾನದಲ್ಲಿ ಸಿಲುಕಿದ್ದ ಡೆಮ್ಸಿ ಮೊಂತೆರೊ ಉಳ್ಳಾಲಕ್ಕೆ ವಾಪಸ್!

ಮಂಗಳೂರು: ಅಫ್ಗಾನಿಸ್ತಾನದಲ್ಲಿ ಸಿಲುಕಿದ್ದ ಡೆಮ್ಸಿ ಮೊಂತೆರೊ ಉಳ್ಳಾಲಕ್ಕೆ ವಾಪಸ್!

- Advertisement -
- Advertisement -

ಮಂಗಳೂರು:ಅಫ್ಗಾನಿಸ್ತಾನದಲ್ಲಿ ಇಕೊಲಾಗ್ ಇಂಟರ್ ನ್ಯಾಷನಲ್ ಕಂಪನಿಯಲ್ಲಿ ಎ.ಸಿ. ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಳ್ಳಾಲದ ಡೆಮ್ಸಿ ಮೊಂತೆರೊ (29) ಮಂಗಳವಾರ ಉಳಿಯದಲ್ಲಿರುವ ತನ್ನ ಮನೆಗೆ ತಲುಪಿದ್ದಾರೆ.

ಅಫ್ಘಾನ್‌ನಲ್ಲೇ ಇದ್ದ ಅವರ ಸಹೋದರ ಮೆಲ್ವಿನ್‌ ಆ. 18ರಂದು ಹುಟ್ಟೂರು ಸೇರಿದ್ದರು. ಆದರೆ ಡೆಮ್ಸಿ ಕಾಬೂಲ್‌ ವಿಮಾನ ನಿಲ್ದಾಣದಲ್ಲೇ ಉಳಿದಿದ್ದು ಮೂರು ದಿನಗಳ ಬಳಿಕ ಏರ್‌ಲಿಫ್ಟ್‌ ಆಗಿ ಕತಾರ್‌ ಮಾರ್ಗವಾಗಿ ದಿಲ್ಲಿ, ಮುಂಬಯಿ ಮೂಲಕ ಮಂಗಳೂರಿಗೆ ತಲುಪಿದ್ದಾರೆ.

ಐದು ವರ್ಷಗಳಿಂದ ಅಫ್ಗಾನಿಸ್ತಾನದ ಕಾಬೂಲಿನಲ್ಲಿ ನ್ಯಾಟೊ ಪಡೆಯ ಮಿಲಿಟರಿ ಬೇಸ್‌ನಲ್ಲಿ ಎಸಿ ಮೆಕ್ಯಾನಿಕ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡೆಮ್ಸಿ ಮನೆಸೇರುತ್ತಿದ್ದಂತೆ ಕುಟುಂಬಸ್ಥರು ನಿರಾಳರಾಗಿದ್ದಾರೆ.


ಇದೇ 17ರಂದು ನ್ಯಾಟೊ ಪಡೆಯ ಕ್ಯಾಂಪ್‌ನಲ್ಲಿದ್ದ ಮೆಲ್ವಿನ್ ಮೊಂತೆರೊ ಅವರನ್ನು ಭಾರತೀಯ ವಾಯುಪಡೆ ಕಾಬೂಲ್‌ನಿಂದ ಏರ್‌ಲಿಫ್ಟ್ ನಡೆಸಿ ಗುಜರಾತ್‌ಗೆ ಕರೆತಂದಿತ್ತು. ಆದರೆ, ಸಹೋದರ ಡೆಮ್ಸಿ ಬೇರೆ ಕ್ಯಾಂಪಿನಲ್ಲಿದ್ದುದರಿಂದ ವಿಮಾನಗಳ ಬರುವಿಕೆಯ ಮಾಹಿತಿ ಸಿಗದೆ ಕಾಬೂಲ್‌ನಲ್ಲಿ ಒಂದು ದಿನ ಉಳಿದಿದ್ದರು. ಇದೇ 18ರಂದು ನ್ಯಾಟೊ ಪಡೆಯ ಅಮೆರಿಕ ವಾಯುಸೇನೆಯವರಿದ್ದ ವಿಮಾನ ಕಾಬೂಲ್ ತಲುಪಿತ್ತು. ಡೆಮ್ಸಿ ಸೇರಿ 155 ಮಂದಿಯನ್ನು ಏರ್ ಲಿಫ್ಟ್ ನಡೆಸಿ ಕತಾರ್‌ನಲ್ಲಿ ಇರಿಸಲಾಯಿತು. ಅಲ್ಲಿ ಭಾರತೀಯ ರಾಯಭಾರಿ ಕಚೇರಿಯವರು ಮೂರು ದಿನಗಳ ಉಳಿಯುವಿಕೆಗೆ ಸಹಕರಿಸಿ, 21ರಂದು ದೆಹಲಿಗೆ ತಲುಪುವಂತೆ ಮಾಡಿ, ಅಲ್ಲಿಂದ ಮುಂಬೈ ತಲುಪಿ ತವರಿಗೆ ಬರಲು ಸಹಕರಿಸಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇದ್ದ ಸಂದರ್ಭ ಅಪ್ಗಾನಿಸ್ತಾನದ ನಾಗರಿಕರು ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಇದನ್ನು ನಿಯಂತ್ರಿಸಲು ನ್ಯಾಟೊ ಪಡೆ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿತ್ತು. ಆದರೂ ನಿಯಂತ್ರಣಕ್ಕೆ ಬಾರದ ಸಂದರ್ಭ ನೆಲಕ್ಕೆ ಗುಂಡು ಹಾರಿಸಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಫೈರಿಂಗ್ ನಡೆದಾಗ ಮೂವರು ಮೃತಪಟ್ಟಿದ್ದರು. ಈ ಘಟನೆ ಇನ್ನೂ ಕಣ್ಣಂಚಿನಲ್ಲಿದೆ ಎಂದು ಡೆಮ್ಸಿ ಹೇಳಿದ್ದಾರೆ.

ಮಾಜಿ ಸಚಿವ, ಮಂಗಳೂರು ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅವರು ಉಳಿಯದ ಮೊಂತೇರೊ ಸಹೋದರರ ಮನೆಗೆ ತೆರಳಿ ಕ್ಷೇಮ ವಿಚಾರಿಸಿದ್ದಾರೆ.

- Advertisement -

Latest News

error: Content is protected !!