ಮಂಗಳೂರು: ಕುಳಾಯಿ ಚಿತ್ರಾಪುರದಲ್ಲಿ ಕೊರೊನಾ ಸೋಂಕಿನ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ರಮೇಶ್ ಹಾಗೂ ಗುಣವತಿ ದಂಪತಿಗಳಿಗೆ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ಮಂಗಳೂರು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಪೋಸ್ಟ್ ಮಾರ್ಟಮ್ಗೂ ಮುನ್ನ ನಡೆಸಿದ ಮೃತದೇಹದ ಕೋವಿಡ್ ಟೆಸ್ಟ್ ನಲ್ಲಿ ರಿಪೋರ್ಟ್ ನೆಗೆಟಿವ್ ಬಂದಿದೆ. ರಿಪೋರ್ಟ್ ನೆಗೆಟಿವ್ ಬೆನ್ನಲ್ಲೇ ಮೃತದೇಹದ ಪೋಸ್ಟ್ ಮಾರ್ಟಮ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್ ಬಂದಿದೆ ಎಂಬ ಆತಂಕದಲ್ಲಿ ರಮೇಶ್ ಮತ್ತು ಗುಣ ದಂಪತಿ ನೇಣಿಗೆ ಶರಣಾಗಿದ್ದರು. ಮಂಗಳೂರು ಹೊರವಲಯದ ಕುಳಾಯಿಯ ರಹಜಾ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿತ್ತು. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮೇಶ್ ಪತ್ನಿ ಗುಣ ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಡೆತ್ ನೋಟ್ ನಲ್ಲಿ ಕೊರೊನಾ ಲಕ್ಷಣಗಳು ಕಾಣುತ್ತಿರುವ ನಮಗೆ ಜೀವನವೇ ಬೇಡ ಎಂಬ ಮನಸ್ಥಿತಿಗೆ ಬಂದಿದ್ದೇವೆ. ಈಗ ನನ್ನ ಪತಿಗೂ ಕೊರೊನಾ ಗುಣಲಕ್ಷಣ ಕಾಣಿಸುಕೊಳ್ಳುತ್ತಿದೆ. ಬ್ಲ್ಯಾಕ್ ಫಂಗಸ್ ನಿಂದ ಕಣ್ಣು ಮತ್ತು ಇತರ ಭಾಗಗಳನ್ನು ಕಳೆದುಕೊಂಡಿದ್ದನ್ನು ನೋಡಿದಾಗ, ನಮ್ಮ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಿದಾಗ ನಮಗೂ ಭಯ ಕಾಡುತ್ತಿದೆ. ನಮಗೆ ಜೀವನವೇ ಬೇಡ ಎಂಬ ಮನಸ್ಥಿತಿಗೆ ಬಂದಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಇದಲ್ಲದೆ ಗುಣವತಿ ಅವರಿಗೆ ಇತರ ಆರೋಗ್ಯ ಸಮಸ್ಯೆಯೂ ಇರುವುದನ್ನು ಬರೆದುಕೊಂಡಿದ್ದರು. ಮಕ್ಕಳಿಲ್ಲ ಕೊರಗು ಕೂಡಾ ದಂಪತಿಗಳನ್ನು ಕಾಡಿತ್ತು ಎಂದು ಹೇಳಲಾಗಿದೆ.
ಗುಣ ಸುವರ್ಣ ಬರೆದಿರುವ ಡೆತ್ನೋಟ್ನಲ್ಲಿ ಅಂತ್ಯ ಸಂಸ್ಕಾರವನ್ನು ಸತ್ಯಜಿತ್ ಸುರತ್ಕಲ್, ಶರಣ್ ಪಂಪ್ವೆಲ್ ಮಾಡಬೇಕು ಎಂದು ತಿಳಿಸಲಾಗಿದೆ. ಈ ಕಾರಣ ಶರಣ್ ಪಂಪ್ವೆಲ್ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸ್ಥಳಕ್ಕೆ ನೀಡಿದ್ದಾರೆ. ‘ರಮೇಶ್ ಸುವರ್ಣ ಪಡುಬಿದ್ರಿ ಮೂಲದವರು ಎಂದು ತಿಳಿದು ಬಂದಿದೆ. ಅವರ ಕುಟುಂಬದವರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಹಿಂದೂ ಧಾರ್ಮಿಕ ಪದ್ಧತಿಯಂತೆ ದಂಪತಿಯ ಅಂತ್ಯ ಸಂಸ್ಕಾರ ಮಾಡಲಾಗುವುದು’ ಎಂದು ಶರಣ್ ತಿಳಿಸಿದ್ದಾರೆ.