ಬೆಂಗಳೂರು: ಪಕ್ಷ ಸಂಘಟನೆಯ ಶಕ್ತಿಯಿಂದ ಸಂಪೂರ್ಣ ಬಹುಮತ ಗಳಿಸುವುದಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ 2023ರ ವಿಧಾನಸಭೆ ಚುನಾವಣೆ ಎದುರಿಸಲಾಗುವುದು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ ಅವರನ್ನು ಇಂದು ಭೇಟಿಯಾದ ಬಳಿಕ ಮಾತನಾಡಿದ ಅವರು, ‘ಬಿ.ಎಸ್. ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿ ಆದರು. ಆದರೆ, ದುರದೃಷ್ಟದಿಂದ ನಾಲ್ಕು ಬಾರಿಯೂ ನಮಗೆ ಪೂರ್ಣ ಬಹುಮತ ಇರಲಿಲ್ಲ. ಇದರಿಂದ ಗೊಂದಲಗಳು ಉಂಟಾಯಿತು ಎಂದರು.
ಮುಂದಿನ ಚುನಾವಾಣೆಯನ್ನು ನಳಿನ್ ಕುಮಾರ್ ನೇತೃತ್ವದಲ್ಲಿ ಸಂಘಟನೆಯ ಶಕ್ತಿಯಿಂದಲೇ ಎದುರಿಸಿ ಪೂರ್ಣ ಬಹುಮತ ಪಡೆಯಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಮುನ್ನಡೆಸಿದರೆ, ನಳಿನ್ ಕುಮಾರ್ ಸಂಘಟನೆಯನ್ನು ಬಲಪಡಿಸಲಿದ್ದಾರೆ ಎಂದರು.
ತಮಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬುದು ಅನೇಕರ ಆಸೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಮಂದಿ ದೂರವಾಣಿ ಕರೆಮಾಡಿ ಅವರ ಆಸೆ ಹಂಚಿಕೊಂಡಿದ್ದಾರೆ. ಆದರೆ, ಪಕ್ಷದ ದೃಷ್ಟಿಯಿಂದ ಯಾರಿಗೆ ಯಾವ ಸ್ಥಾನ ನೀಡಿದರೆ ಅನುಕೂಲ ಆಗಲಿದೆ ಎಂಬುದನ್ನು ಆಧರಿಸಿ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಈಶ್ವರಪ್ಪ ಹೇಳಿದರು.
ಆರ್ ಎಸ್ ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಪಕ್ಷ, ಸಂಘಟನೆ ಮತ್ತು ಸರ್ಕಾರದ ಭಾಗವಾಗಿರುವ ನಾವೆಲ್ಲ ಆಗಾಗ ಭೇಟಿಮಾಡಿ ಸಮಾಲೋಚನೆ ನಡೆಸುವುದು ಸಾಮಾನ್ಯ ಎಂದು ಹೇಳಿದರು.