ಉಡುಪಿ: ಶಿರೂರು ಮಠಕ್ಕೆ ಉತ್ತರಾಧಿಕಾರಿಯಾಗಿ 15 ವರ್ಷದ ಬಾಲಕನನ್ನು ನೇಮಿಸುತ್ತಿರುವುದು ಮತ್ತು ಅದಕ್ಕಾಗಿ ಲಾಕ್ಡೌನ್ ನಿರ್ಬಂಧ ಮಧ್ಯೆಯೇ ಪಟ್ಟಾಭಿಷೇಕ ಕಾರ್ಯಕ್ರಮ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಈ ಹಿಂದೆ ಉಡುಪಿ ಪೇಜಾವರ ಮಠದಲ್ಲಿ ಮಠಾಧೀಶರಾಗಿದ್ದ ವಿಶ್ವವಿಜಯ ಸ್ವಾಮೀಜಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೇಶ ಮತ್ತು ರಾಜ್ಯದಲ್ಲಿ ಕೊರೊನಾ ಸೋಂಕಿನಿಂದಾಗಿ ಜನ ತತ್ತರಿಸಿ ಹೋಗಿದ್ದು ಸರಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಆದರೆ, ಶೀರೂರು ಮೂಲಮಠದಲ್ಲಿ ನೂತನ ಯತಿ ನೇಮಕದ ಧಾರ್ಮಿಕ ಕಾರ್ಯ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ನೂತನ ಯತಿಯ ನೇಮಕ ಆಗುತ್ತಿರುವುದು ತುಂಬಾ ಶೋಚನೀಯ. ಲಾಕ್ಡೌನ್ ಹೇರಿದ್ದರಿಂದ ಈ ಸಂದರ್ಭದಲ್ಲಿ ಅನೇಕ ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಪಟ್ಟಾಭಿಷೇಕ ಕಾರ್ಯದಲ್ಲಿ ಕೊರೋನಾ ರೂಲ್ಸ್ ಗಳನ್ನು ಫಾಲೋ ಮಾಡಲು ಸಾಧ್ಯವಾಗುವುದಿಲ್ಲ. ಹಾಗಿದ್ದರೂ, ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದು ಎಷ್ಟು ಸರಿ ಎಂದು ವಿಶ್ವವಿಜಯ ಪ್ರಶ್ನೆ ಮಾಡಿದ್ದಾರೆ.
2018-2019 ರಲ್ಲಿ ಬಾಲ ಸಂನ್ಯಾಸ ಸ್ವೀಕಾರದ ವಿಚಾರದಲ್ಲಿ ಅಷ್ಟ ಮಠಾಧೀಶರ ವಿರುದ್ಧ ಕೋರ್ಟಿನಲ್ಲಿ ಕೇಸು ಹಾಕಿದ್ದೇನೆ. ಬಾಲಸಂನ್ಯಾಸ ಮಾಡಲು ಅವಕಾಶ ನೀಡಬಾರದು ಎಂದು ಕೋರ್ಟಿಗೆ ಮೊರೆ ಹೋಗಿದ್ದೇನೆ. ಇದೀಗ 15 ವರ್ಷದ ಬಾಲಕನಿಗೆ ಸನ್ಯಾಸ ನೀಡಲಾಗುತ್ತಿದೆ. ಇದು ಅಶಾಸ್ತ್ರೀಯ ಮತ್ತು ಅವೈಜ್ಞಾನಿಕ ನಡೆ. ವೈರಾಗ್ಯ ಬಂದಾಗ ಸನ್ಯಾಸ ನೀಡಬೇಕು ಎಂದು ಮಧ್ವ ವಿಜಯದಲ್ಲಿ ಹೇಳಿದೆ. ವೇದಾಂತ, ತರ್ಕ, ಸಂಸ್ಕೃತ ಜ್ಞಾನ ಇಲ್ಲದ ಅಪ್ರಾಪ್ತ ಬಾಲಕನಿಗೆ ವೈರಾಗ್ಯ ಬರುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಬಾಲಸಂನ್ಯಾಸ ರದ್ದಾಗಬೇಕು ಎಂದು ಕಾನೂನು ಹೋರಾಟ ಮಾಡುತ್ತಿದ್ದೇನೆ. ಬಾಲಸಂನ್ಯಾಸದಿಂದ ಅಷ್ಟಮಠಗಳಲ್ಲಿ ಅನರ್ಥಗಳು ಆಗುತ್ತಿದ್ದವು. ವಿದ್ಯಾಮಾನ್ಯ ಮತ್ತು ವಿಶ್ವೇಶತೀರ್ಥರು ಕೂಡ ಬಾಲಸಂನ್ಯಾಸ ಅಸಮಂಜಸ ಎಂದಿದ್ದರು. ಇದನ್ನು ಕಡೆಗಣಿಸಿ ಶಿರೂರು ಮಠಕ್ಕೆ ಯತಿ ನೇಮಿಸುತ್ತಿರುವ ಸೋದೆ ಮಠಾಧೀಶರ ನಡೆ ಸರಿಯಲ್ಲ ಎಂದು ಹೇಳಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಸುವಂತಿಲ್ಲ. ಹೀಗಿದ್ದರೂ ಈ ಕಾರ್ಯಕ್ರಮಕ್ಕೆ ಹೇಗೆ ಅವಕಾಶ ನೀಡಲಾಗಿದೆ. ಅಲ್ಲದೆ ಈ ವಿಚಾರ ಕೋರ್ಟಿನಲ್ಲಿ ಇರುವಾಗ ಉತ್ತರಾಧಿಕಾರಿ ನೇಮಕ ಸರಿಯಲ್ಲ. ಲಾಕ್ಡೌನ್ ಸಮಯದಲ್ಲಿ ಇದರ ವಿರುದ್ಧ ಕೋರ್ಟ್ ಮೊರೆ ಹೋಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸುಮ್ಮನಿದ್ದೇನೆ ಎಂದಿದ್ದಾರೆ.