ಬೆಳ್ತಂಗಡಿ: ರೋಗಿಯ ಚೇತರಿಕೆಗೆ ವೈದ್ಯರ ಚಿಕಿತ್ಸೆ ಎಷ್ಟು ಮುಖ್ಯವೋ ದಾದಿಯರ ಆರೈಕೆಯೂ ಅಷ್ಟೇ ಮುಖ್ಯ. ಅದರಲ್ಲೂ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಮಮತೆ ಮತ್ತು ಸಹನೆಯಿಂದ ಅಹರ್ನಿಶಿ ಸೇವೆ ಸಲ್ಲಿಸುತ್ತಿರುವ ಎಲ್ಲ ದಾದಿಯರಿಗೂ ಅಂತರಾಷ್ಟ್ರೀಯ ದಾದಿಯರ ದಿನದ ಶುಭಾಶಯಗಳು ಎಂದು ಶಾಸಕ ಹರೀಶ್ ಪೂಂಜರವರು ಹೇಳಿದರು.




ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ನಡೆದ ದಾದಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ದಾದಿಯರ ದಿನದಂದು ನಮ್ಮ ತಾಲೂಕಿನಲ್ಲಿ ಅವಿರತವಾಗಿ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮತ್ತು ರೋಗಿಗಳ ಆರೈಕೆಯನ್ನು ಮಾಡುತ್ತಿರುವ ದಾದಿಯರಿಗೆ ದಾನಿಗಳ ನೆರವಿನಿಂದ ₹10,000 ಪ್ರೋತ್ಸಾಹ ಧನವನ್ನು ನೀಡಿ ಶಕ್ತಿ ತುಂಬುವ ಕಾರ್ಯ ನಡೆದಿದೆ. ಇನ್ನು ಮುಂದಕ್ಕೂ ದಾದಿಯರಿಗೆ ಯಾವುದೇ ಸಂದರ್ಭದಲ್ಲಿ ಏನೇ ಸಹಾಯಬೇಕಿದ್ದರೂ ನೀಡಲು ನಾವು ಸದಾ ಸಿದ್ಧರಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಪ.ಪಂ ಸದಸ್ಯ ಶರತ್ ಕುಮಾರ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ರಾವ್, ಎನ್ ಗಣೇಶ್, ಮೇಲಂತಬೆಟ್ಟು ಗ್ರಾ.ಪಂ ಸದಸ್ಯ ಚಂದ್ರರಾಜ್, ಲಾಯಿಲ ಗ್ರಾ.ಪಂ ಸದಸ್ಯ ಅರವಿಂದ, ಆಸ್ಪತ್ರೆಯ ವೈದ್ಯರು, ದಾದಿಯರು, ಸಿಬ್ಬಂದವರ್ಗದವರು ಉಪಸ್ಥಿತರಿದ್ದರು.