ಉಡುಪಿ: ಲಂಚದ ಹಣ ನೀಡಿಲ್ಲ ಎಂದು ಟೆಂಪೋ ಚಾಲಕರೊಬ್ಬರ ಮೇಲೆ ಶಿರ್ವ ಪೊಲೀಸ್ ಠಾಣೆಯ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪೊಲೀಸರಿಂದ ಹಲ್ಲೆಗೊಳಗಾದ ಚಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
65 ವರ್ಷ ವಯಸ್ಸಿನ ಶೇಖರ್ ಪೂಜಾರಿ ಹಲ್ಲೆಗೊಳಗಾದ ವ್ಯಕ್ತಿ. ಶೇಖರ್ ಪೂಜಾರಿ ಹನುಮಂತಪ್ಪ ಎಂಬವರ ಮಾಲೀಕತ್ವದ ಟೆಂಪೋವನ್ನು ಚಲಾಯಿಸುತ್ತಿದ್ದರು. ಈ ವೇಳೆ ವಾಹನ ತಪಾಸಣೆ ನಡೆಸುತ್ತಿದ್ದ ಶಿರ್ವ ಪೋಲಿಸ್ ಸಿಬ್ಬಂದಿ ಮೂಡುಬೆಳ್ಳೆಯಲ್ಲಿ ಜಲ್ಲಿ ಸಾಗಾಟ ನಡೆಸುತ್ತಿದ್ದ ವೇಳೆ 5೦೦ ರೂಪಾಯಿ ಲಂಚ ಕೇಳಿದ್ದಾರೆ. ಈ ವೇಳೆ ಹಣವಿಲ್ಲವೆಂದಾಗ ವಾಹನ ಠಾಣೆಗೆ ತರಲು ಸೂಚಿಸಿ ಚಾಲಕನನ್ನು ಜೀಪ್ ಗೆ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಎದೆನೋವು, ಕುತ್ತಿಗೆ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದು, ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಶಿರ್ವ ಠಾಣೆಯ ಎಸ್ ಐ ಶ್ರೀ ಶೈಲ ಅವರು ಟೆಂಪೋ ಗೆ ಪರವಾನಿಗೆ ಇರಲಿಲ್ಲ ಈ ಕಾರಣದಿಂದ 500 ರೂಪಾಯಿ ದಂಡ ವಿಧಿಸಲಾಗಿದೆ. ಆದರೆ ಚಾಲಕ ದಂಡ ಕಟ್ಟಲು ನಿರಾಕರಿಸಿ ಪೊಲೀಸ್ ಜೀಪ್ ಅಡಿಗೆ ಬಂದು ಮಲಗಲು ಪ್ರಯತ್ನ ಪಟ್ಟರು. ಆ ಸಂದರ್ಭದಲ್ಲಿ ನಾವು ವಾಹನವನ್ನು ಅಲ್ಲಿಯೇ ಬಿಟ್ಟು ಚಾಲಕನನ್ನು ಸ್ಟೇಶನ್ ಗೆ ಕರೆದುಕೊಂಡು ಬಂದು ಮಾಲಕರ ಸಮ್ಮುಖದಲ್ಲಿ ದಂಡ ಕಟ್ಟಿಸಿಕೊಂಡು ಕಳುಹಿಸಿಕೊಟ್ಟಿದ್ದೇವೆ ಎಂದಿದ್ದಾರೆ.