ಪುತ್ತೂರು: ತಾನು ಕಷ್ಟಪಟ್ಟು ಶ್ರಮವಹಿಸಿ ಪ್ರೀತಿಯಿಂದ ಕಟ್ಟಿದ ಮನೆಯ ಗೃಹ ಪ್ರವೇಶಕ್ಕೆ ಎರಡು ದಿನ ಇರುವಾಗಲೇ ಮನೆಯ ಮಾಲೀಕ ಆ ನೂತನ ಮನೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ದಾರುಣ ಘಟನೆ ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ.
ಸಂಪ್ಯದ ಉದಯಗಿರಿ ನಿವಾಸಿ ವೆಂಕಪ್ಪ ನಾಯ್ಕ್ ರ ಪುತ್ರ ಕೃಷ್ಣಪ್ಪ ನಾಯ್ಕ್(45) ಮೃತಪಟ್ಟ ದುರ್ದೈವಿ.
ಕೃಷ್ಣಪ್ಪ ನಾಯ್ಕ್ ರ ನೂತನ ಮನೆಯ ಗೃಹ ಪ್ರವೇಶ ಇದೇ ಬರುವ ಶನಿವಾರ (ಜ.16 ) ನಿಗದಿಯಾಗಿತ್ತು. ನಿನ್ನೆ ರಾತ್ರಿಯಷ್ಟೇ ಕುತ್ತಿ ಪೂಜೆ ನಡೆದಿತ್ತು. ಇಂದು ಸಂಜೆ ಹೊಸ ಮನೆಯಲ್ಲಿ ವಿದ್ಯುತ್ ನ ಕೆಲಸ ಮಾಡುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದಿದ್ದು, ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಅದಾಗಲೇ ಸಾವನ್ನಪ್ಪಿದ್ದರು.
ಮೃತ ಕೃಷ್ಣಪ್ಪ ನಾಯ್ಕ್ ಪುತ್ತೂರಿನ ಪರ್ಲಡ್ಕ ಬೈಪಾಸ್ ಬಳಿ ಜೀಪ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಮೃತರು ಪತ್ನಿ ಜಯಶ್ರೀ, ಮಕ್ಕಳಾದ ಸಿಂಚನಾ ಮತ್ತು ಸ್ಪಂದನಾರನ್ನು ಅಗಲಿದ್ದಾರೆ.
ಘಟನೆಯ ಕುರಿತು ಮೃತ ಕೃಷ್ಣಪ್ಪ ನಾಯ್ಕ್ ರ ಸಹೋದರ ಚೋಮ ನಾಯ್ಕ್ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.