ಸಂಪಾಜೆ : ಸಂಪಾಜೆ ಯಿಂದ ಕಲ್ಲುಗುಂಡಿಗೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ಕಲ್ಲುಗುಂಡಿ ಅಂಚೆ ಕಚೇರಿ ಬಳಿ ನಡೆದ ಅಪಘಾತದಿಂದ ಸಂಪಾಜೆ ಮೂಲದ ಬೈಕ್ ಸವಾರ ಗೌತಮ್ ಕೆ.ಎನ್ ( 20 ) ರ ಕೈ ಶಾಶ್ವತ ಬಲಹೀನವಾಗಿದೆ. ಹೆಚ್ಚಿನ ಚಿಕಿತ್ಸೆಗೆ ಗೌತಮ್ ಕೆ.ಎನ್ ಕುಟುಂಬ ದಾನಿಗಳ ನೆರವಿನ ನಿರೀಕ್ಷೆ ಯಲ್ಲಿದೆ .

ಗೌತಮ್ ಎ .20 ರಂದು ತೀವ್ರವಾಗಿ ಗಾಯಗೊಂಡು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ 2 ತಿಂಗಳು ಚಿಕಿತ್ಸೆ ಪಡೆದಿದ್ದರು ಆದರೆ ಅವರ ಎಡಗೈ ಸಂಪೂರ್ಣ ಬಲ ಹೀನವಾಗಿದ್ದು , ನರದ ಸಮಸ್ಯೆ ಎದುರಾಗಿದೆ . ಇದರಿಂದ ದುಡಿಯುವ ಕೈಗಳು ಕಾರ್ಯ ನಿಲ್ಲಿಸಿದೆ . ಆರ್ಥಿಕವಾಗಿ ಹಿಂದುಳಿದಿದ್ದ ಕುಟುಂಬಕ್ಕೆ ಸ್ಥಳೀಯ ಸಂಘ ಸಂಸ್ಥೆಗಳು ತಮ್ಮ ಕೈಲಾದಷ್ಟು ಸಹಕರಿಸಿವೆ . ಆದರೆ ಗೌತಮ್ ಮನೆಯಲ್ಲಿ ತೀವ್ರ ಬಡತನ ವಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಹಣ ಹೊಂದಿಸಲಾಗುತ್ತಿಲ್ಲ.
ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಶಸ್ತ್ರಚಿಕಿತ್ಸೆಗೆ ಅಂದಾಜು 3.5 ಲಕ್ಷ ರೂ ವೆಚ್ಚವಾಗಬಹುದು ಮತ್ತು ಇದರಿಂದ ಅವರ ಬಲಹೀನ ಸಮಸ್ಯೆ ನಿವಾರಣೆ ಯಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ .
ಆರ್ಥಿಕವಾಗಿ ಹಿಂದುಳಿದ ಇವರು ತಂದೆ ನಾರಾಯಣ ಕುಕ್ಕೇಟಿ ( 62 ) , ತಾಯಿ ಕುಸುಮ ( 46 ) ಹಾಗೂ ಅಕ್ಕ ಮಧುಶ್ರೀ ಜೊತೆ ವಾಸವಿದ್ದಾರೆ . 2010 ರಲ್ಲಿ ಆಶ್ರಯ ಯೋಜನೆ ಯಲ್ಲಿ ನಿರ್ಮಾಣ ವಾಗುತ್ತಿರುವ ಮನೆ ಕೆಲಸ ಇನ್ನೂ ಪೂರ್ತಿಯಾಗದೆ ಗೃಹ ಪ್ರವೇಶವೂ ಆಗದ ಮನೆಯಲ್ಲಿ ಗೌತಮ್ ಕುಟುಂಬ ವಾಸವಿದೆ . ಇವರ ಕುಟುಂಬ ಈಗಾಗಲೇ ವಿವಿಧ ಸಂಘ ಸಂಸ್ಥೆಗಳಲ್ಲಿ ರೂ . 2.50 ಲಕ್ಷದಷ್ಟು ಸಾಲ ಹೊಂದಿದೆ . ಈ ಕುಟುಂಬಕ್ಕೆ ತಾಯಿಯ ದುಡಿಮೆಯೇ ಆಸರೆ ಯಾಗಿದೆ . ಗೌತಮ್ನ ಸಮಸ್ಯೆ ನಿವಾರಣೆಯಾದರೆ ಕುಟುಂಬಕ್ಕೆ ಆಧಾರವಾಗಬಹುದೆಂಬ ನಿರೀಕ್ಷೆ ಯನ್ನು ಕುಟುಂಬ ಹೊಂದಿದ್ದು , ದಾನಿಗಳ ನೆರವಿನ ನಿರೀಕ್ಷೆಯಲ್ಲಿ ದ್ದಾರೆ.
ನೆರವಿನ ನಿರೀಕ್ಷೆ:
ವೈದ್ಯರ ಮಾಹಿತಿ ಪ್ರಕಾರ ಗೌತಮ್ ಚಿಕಿತ್ಸೆಗೆ ಅಂದಾಜು 3.5 ಲಕ್ಷ ರೂ ಖರ್ಚಾಗುತ್ತದೆ. ಕುಟುಂಬದ ಕಣ್ಣೀರಿನ ಕಥೆ ಓದಿದ ಸಹೃದಯಿ ಓದುಗರು ಸಂಘ ಸಂಸ್ಥೆಗಳು ನೆರವು ನೀಡಿಯಾರು ಎಂಬ ಆಶಾಭಾವನೆ ಕುಟುಂಬ ಹೊಂದಿದೆ. ನೆರವಾಗುವವರು ಗೌತಮ್ ಕೆ.ಎನ್ , ಕೆನರಾ ಬ್ಯಾಂಕ್ ಕಲ್ಲುಗುಂಡಿ , ಖಾತೆ ಸಂಖ್ಯೆ 0643101049842 , ಐಎಫ್ ಸಿಎಸ್ CNRB0000643 ಗೆ ಧನಸಹಾಯ ಮಾಡಬಹುದು . ಮಾಹಿತಿಗಾಗಿ 9743692758 ಅನ್ನು ಸಂಪರ್ಕಿಸಬಹುದು .