ಚಾಮರಾಜನಗರ: ಆನೆಗಳ ಜೊತೆ ಕಾದಾಟದಲ್ಲಿ ಬಾಲವನ್ನು ಕಳೆದುಕೊಂಡ ಆನೆಯೊಂದು ನೋವನ್ನು ತಾಳಲಾರದೇ ನೀರಿನಲ್ಲಿ ನಿಂತು ಕಾಲ ಕಳೆದ ಘಟನೆ ಕಾವೇರಿ ವನ್ಯಜೀವಿಧಾಮದ ಸಂಗಮ ವಲಯದಲ್ಲಿ ನಡೆದಿದೆ.
ಕಾದಾಟದಲ್ಲಿ ಬಾಲ ಕಳೆದುಕೊಂಡು ಗಾಯಗೊಂಡಿರುವ ಆನೆಯೊಂದು ನೋವು ತಾಳಲಾರದೇ ಜೊತೆಗೆ ನೊಣಗಳ ಕಾಟದಿಂದ ರಕ್ಷಿಸಿಕೊಳ್ಳಲು ನೀರಿನಲ್ಲಿ ನಿಂತಿರುವುದು ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ಬಂದಿದೆ. ಇದೀಗ ಗಾಯಗೊಂಡಿರುವ ಆನೆಗೆ ಚಿಕಿತ್ಸೆ ನೀಡಲಾಗುತ್ತಿದೆ.
“ಸಲಗಕ್ಕೆ ಚಿಕಿತ್ಸೆ ಕೊಡಿಸಲು ಮತ್ತಿಗೂಡ ಅರಣ್ಯದಿಂದ ಅಭಿಮನ್ಯು ಹಾಗೂ ಕೃಷ್ಣ ಎಂಬ ಎರಡು ಕುಮ್ಕಿ ಆನೆ ಹಾಗೂ ಬನ್ನೇರುಘಟ್ಟದಿಂದ ವೈದ್ಯ ಡಾ. ಉಮಾಶಂಕರ್ ಅವರನ್ನು ಕರೆಸಲಾಗಿದೆ. ಎರಡು ದಿನಗಳ ಕಾಲ ಆನೆಯ ಮೇಲೆ ನಿಗಾ ವಹಿಸಲಾಗುವುದು. ಗಾಯ ಮಾಸದಿದ್ದರೆ ಸಾಕಾನೆಗಳ ಸಹಾಯ ಪಡೆದು ಚಿಕಿತ್ಸೆ ನೀಡಲಾಗುವುದು. ಸದ್ಯ ಅದು ನೀರಿನಿಂದ ಮೇಲೆ ಓಡಾಡಿಕೊಂಡಿದೆ” ಎಂದು ಸಿಸಿಎಫ್ ಮನೋಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಇದೇ ಜೂನ್ ತಿಂಗಳಿನಲ್ಲಿ ಕೇರಳದಲ್ಲಿ ಗರ್ಭಿಣಿ ಆನೆಯೊಂದು ಪಟಾಕಿ ತುಂಬಿದ್ದ ಅನಾನಸ್ ತಿಂದು ಸ್ಫೋಟಗೊಂಡು ಆ ನೋವು ತಾಳಲಾರದೇ ನೀರಿನಲ್ಲಿಯೇ ನಿಂತಿದ್ದ ಸಂಗತಿ ಇಡೀ ದೇಶದ ಗಮನ ಸೆಳೆದಿತ್ತು. ಕೊನೆಗೂ ಬದುಕಲಾಗದೇ ಆ ಆನೆ ಮೃತಪಟ್ಟಿತ್ತು. ಬಳಿಕ ಘಟನೆಗೆ ಕಾರಣರಾದ ಮೂವರನ್ನು ಬಂಧಿಸಲಾಗಿತ್ತು.