ಮೂಲ್ಕಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಮೂಲ್ಕಿಯಲ್ಲಿ ಇಂದು ಮಧ್ಯಾಹ್ನ ನಡೆದ ಅಪಘಾತದಲ್ಲಿ ಹಳೆಯಂಗಡಿಯ ಯುವಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಅಪಘಾತದಲ್ಲಿ ಗಾಯಗೊಂಡ ಯುವಕನನ್ನು ತೇಜ್ಪಾಲ್ ಸುವರ್ಣ ಎಂದು ಗುರತಿಸಲಾಗಿದೆ.
ಮಂಗಳೂರಿನಿಂದ ಉಡುಪಿಯತ್ತ ಸಂಚರಿಸುತ್ತಿದ್ದ ಕಾರು ಮೂಲ್ಕಿಯ ಪುನರೂರು ಪೆಟ್ರೋಲ್ ಪಂಪ್ನಲ್ಲಿ ಇಂಧನ ತುಂಬಿಸಲು ತಿರುಗಿಸಿದಾಗ ಅದೇ ರಸ್ತೆಯಲ್ಲಿ ಬರುತ್ತಿದ್ದ ತೇಜ್ಪಾಲ್ ಅವರ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡರು. ತಕ್ಷಣ ಸ್ಥಳೀಯ ಕಾರು ಚಾಲಕರು ಮತ್ತು ರಿಕ್ಷಾ ಚಾಲಕರ ಸಹಿತ ಸ್ಥಳೀಯರು ಗಾಯಾಳುವನ್ನು ಮೂಲ್ಕಿಯ ಖಾಸಗಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ನೀಡಲಾಗಿದೆ. ಗಾಯಾಳು ತೇಜ್ಪಾಲ್ ಅವರಿಗೆ ತಲೆ, ಮುಖಕ್ಕೆ, ಎರಡೂ ಕೈಗೆ, ಭುಜ ಹಾಗೂ ಕಾಲಿಗೆ ಗಾಯವಾಗಿದೆ.
ಹಳೆಯಂಗಡಿಯ ಪ್ರದೇಶದಲ್ಲಿ ಅಪಘಾತ ಸಂಭವಿಸುವಾಗ ಹಾಗೂ ಹೆದ್ದಾರಿಯಲ್ಲಿ ಅವಘಡ ನಡೆದಾಗ ಸಹಾಯವನ್ನು ನೀಡುವ ಸೇವಾ ಮನೋಭಾವನೆಯ ತೇಜ್ಪಾಲ್ ಅವರು ಹಳೆಯಂಗಡಿಯ ಪೂಜಾ ಫ್ರೇಂಡ್ಸ್ನ ಜೈಕೃಷ್ಣ ಕೋಟ್ಯಾನ್ ಅಂಬ್ಯುಲೆನ್ಸ್ ಸಹಾಯ ಹಸ್ತದ ಸಕ್ರೀಯ ಸದಸ್ಯನಾಗಿದ್ದಾರೆ. ಘಟನೆ ಸಂಭವಿಸಿದ ತಕ್ಷಣ ಸ್ವತಃ ಜೈಕೃಷ್ಣ ಕೋಟ್ಯಾನ್ ಅವರೇ ಸ್ಥಳಕ್ಕೆ ಬಂದು ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.