ತುಮಕೂರು : ತಾಲೂಕಿನ ಹೇರೂರು ಗ್ರಾಮದಲ್ಲಿ ಇತ್ತೀಚಿಗೆ ರೈತರೊಬ್ಬರ 700 ಅಡಕೆ-ತೆಂಗಿನ ಮರಗಳನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಕತ್ತರಿಸಿ ಹಾಕಿದ್ದರು. ಇನ್ನೆರಡು ವರ್ಷದಲ್ಲಿ ಫಸಲು ಬಿಡುವ ಹಂತಕ್ಕೆ ಬಂದ್ದಿದ್ದ ಮರಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ರೈತನಿಗೆ ಪಿಎಸ್ಐ ಅಚ್ಚರಿಯ ಉಡುಗೊರೆ ನೀಡುವ ಮೂಲಕ ಸಾಂತ್ವನ ಹೇಳಿದ್ದಾರೆ.
ರೈತ ನಾಗರಾಜ ಅವರ ತೋಟದಲ್ಲಿ ನಳನಳಿಸುತ್ತಿದ್ದ ಅಡಕೆ-ತೆಂಗು-ಬಾಳೆ ಗಿಡಕ್ಕೆ ಆ.18ರ ರಾತ್ರಿ ಕತ್ತಿ ಬೀಸಿದ ಕಿಡಿಗೇಡಿಗಳು ಎಲ್ಲ ಮರಗಳನ್ನೂ ತುಂಡರಿಸಿ ಹೋಗಿದ್ದರು. ಈ ಬಗ್ಗೆ ಕುಣಿಗಲ್ ಪಟ್ಟಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ತೋಟ ಕಳೆದುಕೊಂಡು ಕಣ್ಣೀರಿಡುತ್ತಿದ್ದ ನಾಗರಾಜು ಅವರ ಬಗ್ಗೆ ಮರುಕಪಟ್ಟ ಕುಣಿಗಲ್ ಪಿಎಸ್ಐ ವಿಕಾಸ್ ಗೌಡ ಮತ್ತು ಇವರ ಸ್ನೇಹಿತ ಎಚ್.ಡಿ. ಕೋಟೆಯ ಶ್ರೀರಾಮ್ ಇಬ್ಬರೂ ಸಂತ್ರಸ್ತನ ನೆರವಿಗೆ ಸಹಾಯಹಸ್ತ ಚಾಚಿದ್ದಾರೆ.
ತೋಟ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ರೈತನಿಗೆ ಏನಾದರೂ ಕೈಲಾದ ಸಹಾಯ ಮಾಡಲು ಯೋಚಿಸಿದ ಪಿಎಸ್ಐ ಎಸ್. ವಿಕಾಸ್ ಗೌಡ ಅವರು ಶ್ರೀರಾಮ್ರ ಮೂಲಕ ಬರೋಬ್ಬರಿ 650 ಅಡಕೆ ಸಸಿ, 10 ತೆಂಗಿನ ಸಸಿಗಳನ್ನು ಕೊಡಿಸಿದ್ದಾರೆ. ಎಚ್.ಡಿ. ಕೋಟೆಯಿಂದಲೇ ವಾಹನದಲ್ಲಿ ರೈತನ ಮನೆ ಬಾಗಿಲಿಗೆ ಗಿಡಗಳನ್ನು ಕಳುಹಿಸಿಕೊಡಲಾಗಿದೆ. ಆ ಮೂಲಕ ಮತ್ತೆ ರೈತನ ಬದುಕಲ್ಲಿ ಭರವಸೆಯ ಬೆಳಕನ್ನು ಚೆಲ್ಲಿದ್ದಾರೆ. ಪಿಎಸ್ಐ ಮತ್ತು ಅವರ ಸ್ನೇಹಿತನ ಮಾನವೀಯತೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪೊಲೀಸ್ ವೃತ್ತಿ ಕಾನೂನು ಸುವ್ಯವಸ್ಥೆ ಜತೆಗೆ ಸಮಾಜ ಸೇವೆಯಲ್ಲೂ ತೊಡಗುವುದನ್ನು ಕಲಿಸಿದೆ. ಈ ನಿಟ್ಟಿನಲ್ಲಿ ನಾಗರಾಜು ಅವರಿಗೆ ಅಡಕೆ- ಮತ್ತು ತೆಂಗಿನ ಸಸಿಗಳನ್ನು ಕೊಡಿಸಲಾಗಿದೆ. ಇದಕ್ಕೆ ಸಹಕಾರ ನೀಡಿದ ರೈತ ಶ್ರೀರಾಮ್ ಅವರಿಗೆ ಧನ್ಯವಾದ ಎಂದು ಪಿಎಸ್ಐ ವಿಕಾಸ್ ಗೌಡ ತಿಳಿಸಿದ್ದಾರೆ. ತೋಟ ನಾಶ ಮಾಡಿದ ಕಿಡಿಗೇಡಿಗಳು ಸದ್ಯ ಕಂಬಿ ಎಣಿಸುತ್ತಿದ್ದಾರೆ.