ಹೊನ್ನಾವರ: ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಸೀತಾರಾಮ ಹೆಗಡೆ ಮುಡಾರೆ (64) ಅವರು ಅನಾರೋಗ್ಯದಿಂದ ಸೆ.18ರಂದು ನಿಧನರಾದರು.
ಬಡಗುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಹಲವು ದಶಕಗಳ ಕಾಲ ಕಲಾ ಸೇವೆ ಸಲ್ಲಿಸಿದ್ದ ಅವರು, ತಮ್ಮ ವಿಶಿಷ್ಟ ಹಾಸ್ಯ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.
ಕೆರೆಮನೆಯ ಶ್ರೀ ಇಡುಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಗುಂಡಬಾಳ ಮೇಳ ಸೇರಿದಂತೆ ದಕ್ಷಿಣ ಕನ್ನಡದ ಹಲವು ವೃತ್ತಿಪರ ಮೇಳಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದರು. ‘ಸುಭದ್ರಾ ಪರಿಣಯ’, ‘ಶ್ರೀ ಕೃಷ್ಣಾವತಾರ’, ‘ಸೀತಾಪಹರಣ’ ಹಾಗೂ ‘ಲವಕುಶ’ ಸೇರಿದಂತೆ ಹಲವು ಪ್ರಸಂಗಗಳಲ್ಲಿ ಹಾಸ್ಯ ಪಾತ್ರಗಳ ಜೊತೆಗೆ ಪ್ರಮುಖ ವೇಷಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು. ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆ ಹಾಗೂ ಕೆರೆಮನೆ ಶಿವಾನಂದ ಹೆಗಡೆ ಸೇರಿದಂತೆ ಹಲವು ಹಿರಿಯ ಕಲಾವಿದರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.
ಹೊಸಾಕುಳಿ ಮುಡಾರೆ ಮೂಲದ ಸೀತಾರಾಮ ಹೆಗಡೆ ಅವರು ಪ್ರಸ್ತುತ ಮಂಕಿ ಸಮೀಪದ ಚಿತ್ತಾರ ಗ್ರಾಮದ ಮುಂಡಾರದಲ್ಲಿ ವಾಸವಾಗಿದ್ದರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಯಕ್ಷಗಾನ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.


