ಮಂಗಳೂರು; ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಮಂಗಳೂರು ಸಮೀಪದ ಕುತ್ತಾರು ನಿವಾಸಿ, ಅವಿವಾಹಿತ ಯುವಕನೋರ್ವ ತಂಗಿದ್ದ ಕೊಠಡಿಯಲ್ಲೇ ಹೃದಯಾಘಾತದಿಂದ ಅಕಾಲಿಕ ಸಾವಿಗೀಡಾದ ದಾರುಣ ಘಟನೆ ಸಂಭವಿಸಿದೆ.
ಕುತ್ತಾರುವಿನ ಕೊರಗಜ್ಜನ ಆದಿಕ್ಷೇತ್ರದ ಬಳಿಯ ನಿವಾಸಿ ಶರತ್ ಕುಮಾರ್ (35) ಮೃತಪಟ್ಟ ಯುವಕ.
ಕೇವಲ ಐದು ತಿಂಗಳ ಹಿಂದಷ್ಟೇ ಸೌದಿಯ ಕನ್ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಸೂಪರ್ವೈಸರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ಶರತ್, ತಮಿಳುನಾಡು ಮೂಲದ ಸಹೋದ್ಯೋಗಿಯೊಂದಿಗೆ ಕಂಪನಿಯ ವಸತಿ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಸೋಮವಾರ ರಾತ್ರಿ ಮಂಗಳೂರಿನಲ್ಲಿದ್ದ ತಮ್ಮ ಅಣ್ಣನೊಂದಿಗೆ ಫೋನ್ನಲ್ಲಿ ಮಾತನಾಡಿದ್ದ ಅವರು, ಬಳಿಕ ಮಲಗಿದ್ದರು.ಮಂಗಳವಾರ ಬೆಳಿಗ್ಗೆ ಕೆಲಸಕ್ಕೆ ತೆರಳಲು ಇಟ್ಟಿದ್ದ ಅಲಾರಾಂ ಬಾರಿಸಿದರೂ ಶರತ್ ಎದ್ದೇಳಲಿಲ್ಲ. ಇದರಿಂದ ಅನುಮಾನಗೊಂಡು ಕೊಠಡಿ ಸಹವರ್ತಿ ಪರಿಶೀಲಿಸಿದಾಗ ಶರತ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಪ್ರಾಥಮಿಕ ಮಾಹಿತಿಯಂತೆ ತಡರಾತ್ರಿ ಸಂಭವಿಸಿದ ತೀವ್ರ ಹೃದಯಾಘಾತವೇ ಸಾವಿಗೆ ಕಾರಣ ಎನ್ನಲಾಗಿದೆ.
ಪ್ರಸ್ತುತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಲ್ಲಿನ ಆಸ್ಪತ್ರೆಯಲ್ಲಿರಿಸಲಾಗಿದ್ದು, ಮೃತದೇಹವನ್ನು ತಾಯ್ನಾಡಿಗೆ ತರಲು ಅನಿವಾಸಿ ಕನ್ನಡಿಗರು ಹಾಗೂ ಸಂಬಂಧಿಕರು ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಮೃತರು ತಾಯಿ ಹಾಗೂ ಅಣ್ಣನನ್ನು ಅಗಲಿದ್ದಾರೆ.


