ಖ್ಯಾತ ಹಿನ್ನೆಲೆ ಗಾಯಕ ಹಾಗೂ ಸಂಗೀತ ನಿರ್ದೇಶಕ ವಿಜಯ್ ಪ್ರಕಾಶ್ ಅವರು ದಕ್ಷಿಣ ಕನ್ನಡದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ರವಿವಾರ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.
ಕ್ಷೇತ್ರಕ್ಕೆ ಆಗಮಿಸಿದ ಅವರಿಗೆ ದೇವಾಲಯದ ಆಡಳಿತ ಮಂಡಳಿ ಹಾಗೂ ಅರ್ಚಕ ವೃಂದದವರು ಆತ್ಮೀಯವಾಗಿ ಸ್ವಾಗತ ಕೋರಿದರು. ಬಳಿಕ ವಿಜಯ್ ಪ್ರಕಾಶ್ ಅವರು ಶ್ರೀದೇವಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ದೇವಾಲಯದ ವತಿಯಿಂದ ಅವರಿಗೆ ಶಾಲ ಹೊದಿಸಿ, ಶ್ರೀದೇವಿಯ ಪ್ರಸಾದ ನೀಡುವ ಮೂಲಕ ಗೌರವಿಸಲಾಯಿತು.
ದರ್ಶನದ ನಂತರ ಮಾತನಾಡಿದ ಅವರು, “ಕಟೀಲಮ್ಮನ ದರ್ಶನ ಪಡೆದಿರುವುದು ಅತ್ಯಂತ ಸಂತೋಷ ತಂದಿದೆ. ದೇವಿಯ ಸನ್ನಿಧಾನಕ್ಕೆ ಬಂದಾಗ ಮನಸ್ಸಿಗೆ ಸಿಗುವ ಆಧ್ಯಾತ್ಮಿಕ ಶಾಂತಿ ಅಪಾರ” ಎಂದು ತಮ್ಮ ಅನುಭವ ಹಂಚಿಕೊಂಡರು.
ಇದೇ ವೇಳೆ ದೇವಸ್ಥಾನದ ಆವರಣದಲ್ಲಿದ್ದ ಸಾರ್ವಜನಿಕರು ಹಾಗೂ ಅಭಿಮಾನಿಗಳು ನೆಚ್ಚಿನ ಗಾಯಕನೊಂದಿಗೆ ಫೋಟೋ ಮತ್ತು ಸೆಲ್ಫಿ ಪಡೆದು ಸಂಭ್ರಮಿಸಿದರು.


