ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹60 ರಿಂದ ₹75 ರವರೆಗೆ ಮಾರಾಟವಾಗುತ್ತಿದೆ.
ರಾಜ್ಯದಲ್ಲಿ ಮುಂಗಾರು ಮಳೆಯ ಅಭಾವದಿಂದ ಬರಗಾಲ ಉಂಟಾಗಿದ್ದು, ಈರುಳ್ಳಿ ಇಳುವರಿ ಶೇಕಡಾ 70% ರಷ್ಟು ಕುಸಿದಿರುವುದೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಈರುಳ್ಳಿ ಮಾತ್ರ ಲಭ್ಯವಿದ್ದು, ದಾಸ್ತಾನು ಕೊರತೆ ಎದುರಾಗಿದೆ.
ಇದರ ಜೊತೆಗೆ, ಇಲ್ಲಿಂದ ಹೊರರಾಜ್ಯ ಹಾಗೂ ವಿದೇಶಗಳಿಗೆ ಈರುಳ್ಳಿ ರಫ್ತಾಗುತ್ತಿದ್ದರೂ ಹೊರಗಿನಿಂದ ಆಮದು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದು ಅಭಾವವನ್ನು ಮತ್ತಷ್ಟು ಹೆಚ್ಚಿಸಿದೆ. ಇತ್ತೀಚೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಈರುಳ್ಳಿ ಬೆಲೆ ₹10 ರಿಂದ ₹20 ರಷ್ಟು ಹೆಚ್ಚಾಗಿದ್ದು, ಈ ಬೆಲೆ ಏರಿಕೆ ಮುಂದಿನ ಒಂದರಿಂದ ಒಂದೂವರೆ ತಿಂಗಳವರೆಗೆ ಮುಂದುವರಿದು ಶೀಘ್ರದಲ್ಲೇ ₹100ರ ಗಡಿ ತಲುಪುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.


