ಕೊಚ್ಚಿಯ ಪೆರುಂಬಾವೂರಿನ ನೆಡುಂಗಪ್ಪ ಸಮೀಪದ ಕೊಟ್ಟಪ್ಪಾಡಿ-ಕುರುಪ್ಪಂಪಾಡಿ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ 9 ಗಂಟೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
2ನೇ ತರಗತಿ ವಿದ್ಯಾರ್ಥಿ ಜೋಶುವಾ ಬೆಸಿಲ್ ತನ್ನ ತಂದೆಯೊಂದಿಗೆ ಕಿರಾಣಿ ಅಂಗಡಿಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ರಸ್ತೆಯ ತಿರುವಿನಲ್ಲಿ ತಂದೆಯನ್ನು ಹಿಂಬಾಲಿಸಿ ರಸ್ತೆ ದಾಟುತ್ತಿದ್ದ ಜೋಶುವಾ, ಎದುರಿನಿಂದ ವೇಗವಾಗಿ ಬಂದ ಭಾರಿ ವಾಹನವನ್ನು ಕಂಡು ಪಕ್ಕಕ್ಕೆ ಸರಿಯಲು ಯತ್ನಿಸಿದರೂ ಅತಿವೇಗದಲ್ಲಿದ್ದ ಟಿಪ್ಪರ್ ಲಾರಿ ಆತನ ಮೇಲೆ ಹರಿದಿದೆ.
ಘಟನೆಗೆ ಸಂಬಂಧಿಸಿದಂತೆ ಕುರುಪ್ಪಂಪಾಡಿ ಪೊಲೀಸರು ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದು, ಮೃತದೇಹವನ್ನು ಪೆರುಂಬಾವೂರು ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ರಸ್ತೆಯಲ್ಲಿ ಟಿಪ್ಪರ್ ಲಾರಿಗಳ ಅತಿಯಾದ ವೇಗದ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


