Wednesday, August 12, 2026
Homeಕರಾವಳಿಬೆಳ್ತಂಗಡಿ : ಜಮಲಾಬಾದ್ ಕೋಟೆಗೆ ರೋಪ್‌ವೇ ನಿರ್ಮಾಣಕ್ಕೆ ಯು.ಟಿ. ಖಾದರ್ ಅವರಿಗೆ ರಕ್ಷಿತ್ ಶಿವರಾಂ ಮನವಿ

ಬೆಳ್ತಂಗಡಿ : ಜಮಲಾಬಾದ್ ಕೋಟೆಗೆ ರೋಪ್‌ವೇ ನಿರ್ಮಾಣಕ್ಕೆ ಯು.ಟಿ. ಖಾದರ್ ಅವರಿಗೆ ರಕ್ಷಿತ್ ಶಿವರಾಂ ಮನವಿ

- Advertisement -
- Advertisement -

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಜಮಲಾಬಾದ್ ಕೋಟೆ (ಗಡಾಯಿ ಕಲ್ಲು) ಪ್ರವಾಸಿ ತಾಣಕ್ಕೆ ರೋಪ್‌ವೇ ನಿರ್ಮಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ  ಅವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿಗಳು ಬಗ್ಗೆ ಮತ್ತು ಕುಟುಂಬ ಕಲ್ಯಾಣ ಸಚಿವರು  ಯು.ಟಿ. ಖಾದರ್ ಅವರಿಗೆ ಆ.12 ರಂದು ಮನವಿ ಸಲ್ಲಿಸಿದರು.

ಜಮಲಾಬಾದ್ ಕೋಟೆ ಐತಿಹಾಸಿಕ ಹಿನ್ನೆಲೆ ಹಾಗೂ ಅಪೂರ್ವ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಪ್ರಮುಖ ಪ್ರವಾಸಿ ತಾಣವಾಗಿದ್ದು, ಕೋಟೆಯನ್ನು ತಲುಪಲು ಹೆಚ್ಚಿನ ಸಂಖ್ಯೆಯ ಮೆಟ್ಟಿಲುಗಳನ್ನು ಏರಬೇಕಾಗಿರುವುದರಿಂದ ಮಕ್ಕಳು, ಹಿರಿಯ ನಾಗರಿಕರು, ದಿವ್ಯಾಂಗರು ಹಾಗೂ ಆರೋಗ್ಯ ಸಮಸ್ಯೆ ಹೊಂದಿರುವ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ರೋಪ್‌ವೇ ನಿರ್ಮಾಣ ಅಗತ್ಯವಿದೆ ಎಂದು ರಕ್ಷಿತ್ ಶಿವರಾಂ ಮನವಿಯಲ್ಲಿ ತಿಳಿಸಿದ್ದಾರೆ.

ರೋಪ್‌ವೇ ನಿರ್ಮಾಣದಿಂದ ಜಮಲಾಬಾದ್ ಕೋಟೆಗೆ ರಾಜ್ಯ, ದೇಶ ಹಾಗೂ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಸಾಧ್ಯತೆಯಿದ್ದು, ಇದರಿಂದ ಬೆಳ್ತಂಗಡಿ ತಾಲೂಕಿನ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ದೊರೆಯಲಿದೆ. ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದರೊಂದಿಗೆ ಹೋಟೆಲ್, ಹೋಂಸ್ಟೇ, ಸಾರಿಗೆ, ಸ್ಥಳೀಯ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳ ಆರ್ಥಿಕ ಚಟುವಟಿಕೆಗಳು ವೃದ್ಧಿಯಾಗಲಿವೆ ಎಂದು ಅವರು ವಿವರಿಸಿದ್ದಾರೆ.

ಜಮಲಾಬಾದ್ ಕೋಟೆಗೆ ರೋಪ್‌ವೇ ನಿರ್ಮಾಣ ಸಂಬಂಧ ಪ್ರಾಥಮಿಕ ಕಾರ್ಯಸಾಧ್ಯತಾ ಅಧ್ಯಯನ ಕೈಗೊಂಡು, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಹಾಗೂ ಪುರಾತತ್ವ ಇಲಾಖೆಯ ಸಮನ್ವಯದಲ್ಲಿ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸಬೇಕು ಎಂದು ರಕ್ಷಿತ್ ಶಿವರಾಂ ಒತ್ತಾಯಿಸಿದ್ದಾರೆ.

ಅಲ್ಲದೆ, ವಾಹನ ನಿಲುಗಡೆ, ಶೌಚಾಲಯ, ಕುಡಿಯುವ ನೀರು, ಮಾಹಿತಿ ಕೇಂದ್ರ, ಭದ್ರತಾ ವ್ಯವಸ್ಥೆ ಸೇರಿದಂತೆ ಅಗತ್ಯ ಪ್ರವಾಸೋದ್ಯಮ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ, ಜಮಲಾಬಾದ್ ಕೋಟೆಯನ್ನು ಪ್ರಮುಖ ಹೆರಿಟೇಜ್ ಹಾಗೂ ಇಕೋ-ಟೂರಿಸಂ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸ್ಥಳೀಯ ಜನರ ಆರ್ಥಿಕ ಪ್ರಗತಿಗೆ ಜಮಲಾಬಾದ್ ಕೋಟೆ ಪ್ರಮುಖ ಪಾತ್ರ ವಹಿಸಬಲ್ಲುದಾಗಿದ್ದು, ರೋಪ್‌ವೇ ಯೋಜನೆಯನ್ನು ಸರ್ಕಾರ ಆದ್ಯತೆಯ ಮೇರೆಗೆ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಸಚಿವ ಯು.ಟಿ. ಖಾದರ್ ಅವರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ  ಕಾರ್ಯದರ್ಶಿ, ಪ್ರವೀಣ್ ಫೆರ್ನಾಂಡಿಸ್  ಉಪಸ್ಥಿತರಿದ್ದರು.

- Advertisement -

Latest News

error: Content is protected !!