
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿಯ ಅವ್ಯವಸ್ಥೆ, ನಿರ್ಲಕ್ಷ್ಯ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಕುಂದುಕೊರತೆಗಳಿಗೆ ಸರಿಯಾಗಿ ಸ್ಪಂದಿಸದ ಧೋರಣೆಯನ್ನು ಖಂಡಿಸಿ ಬಜ್ಪೆ ಪಟ್ಟಣ ಪಂಚಾಯತ್ನ ಜನಪ್ರತಿನಿಧಿಗಳು ಶನಿವಾರ ಕೆಂಜಾರಿನಲ್ಲಿ ಧರಣಿ ನಡೆಸಿದರು.
ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಅವರ ಸಮ್ಮುಖದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳು, ಪ್ರತಿಭಟನಾಕಾರರಿಂದ ಅಧಿಕೃತ ಮನವಿ ಪತ್ರ ಸ್ವೀಕರಿಸಿದರು. ಅಲ್ಲದೆ, ಮನವಿಯಲ್ಲಿ ಉಲ್ಲೇಖಿಸಲಾದ ಎಲ್ಲಾ ಬೇಡಿಕೆಗಳನ್ನು ಈ ತಿಂಗಳ ಅಂತ್ಯದೊಳಗೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಿಗಳಿಂದ ಸ್ಪಷ್ಟ ಭರವಸೆ ದೊರೆತ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಆದರೆ, ನಿಗದಿತ ಸಮಯದೊಳಗೆ ಬೇಡಿಕೆಗಳು ಈಡೇರದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಕೌನ್ಸಿಲರ್ಗಳು ಎಚ್ಚರಿಸಿದ್ದಾರೆ.
ಈ ಹೋರಾಟದಲ್ಲಿ ಬಜ್ಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ, ಉಪಾಧ್ಯಕ್ಷೆ ಮಲ್ಲಿಕಾ ಚಂದ್ರಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ರಿತೇಶ್ ಶೆಟ್ಟಿ ಹಾಗೂ ಕೌನ್ಸಿಲರ್ಗಳಾದ ಸಿರಾಜ್ ಬಜ್ಪೆ, ರಾಜೇಶ್ ಅಮೀನ್, ಪದ್ಮನಾಭ, ಜಯಂತ್, ಜೇಕಬ್ ಪೆರೇರಾ, ಕಿರಣ್, ಗುಲ್ಶನ್ ಬಾನು, ಫರ್ಝಾನ, ದಿನೇಶ್, ಸುಪ್ರಿತಾ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


