
ಬೆಂಗಳೂರು: ಶಾಸಕರ ಸಾಮೂಹಿಕ ರಾಜೀನಾಮೆ ಸುಳಿವು ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದು, “ಯಾರಾದರೂ ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅದನ್ನು ಅಂಗೀಕರಿಸುತ್ತೇನೆ” ಎಂದು ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜಕೀಯದಲ್ಲಿ ರಾಜೀನಾಮೆ ನೀಡುವುದು ಹೊಸದೇನಲ್ಲ, ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಆದರೆ ಪಕ್ಷ ಮತ್ತು ಭವಿಷ್ಯದ ರಾಜಕೀಯ ಬೆಳವಣಿಗೆ ಮುಖ್ಯ ಎನಿಸಿದರೆ ಪ್ರತಿಯೊಬ್ಬರೂ ತಾಳ್ಮೆ ಕಾಯ್ದುಕೊಳ್ಳಬೇಕು” ಎಂದು ಸಲಹೆ ನೀಡಿದರು.
ತಮ್ಮ ರಾಜಕೀಯ ರಂಗದ ಆರಂಭಿಕ ದಿನಗಳನ್ನು ಸ್ಮರಿಸಿದ ಮುಖ್ಯಮಂತ್ರಿಗಳು, “ಧರ್ಮಸಿಂಗ್ ಹಾಗೂ ಸಿದ್ದರಾಮಯ್ಯ ಅವರ ಸಚಿವ ಸಂಪುಟ ರಚನೆ ವೇಳೆ ನನಗೂ ಸ್ಥಾನ ಕೈತಪ್ಪಿತ್ತು. ವೀರೇಂದ್ರ ಪಾಟೀಲ್ ಅವರ ಅವಧಿಯಲ್ಲಿ ಬಂಗಾರಪ್ಪ ಅವರಿಗೆ, ನಂತರ ಧರ್ಮಸಿಂಗ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೂ ಅವಕಾಶ ಸಿಕ್ಕಿರಲಿಲ್ಲ. ಹಾಗೆಂದು ಯಾರೂ ಅಸಮಾಧಾನಗೊಂಡು ನಿರ್ಗಮಿಸಲಿಲ್ಲ, ಮುಂದೆ ಅವರೆಲ್ಲರೂ ಸಿಎಂ ಆಗಲಿಲ್ಲವೇ? ನಾನು ಮತ್ತು ಪರಮೇಶ್ವರ್ ಕೂಡ ತಾಳ್ಮೆಯಿಂದ ಇರಲಿಲ್ಲವೇ? ಅಂದೇ ನಾನು ರಾಜೀನಾಮೆ ನೀಡಬಹುದಿತ್ತಲ್ಲವೇ? ಆದ್ದರಿಂದ ಪಕ್ಷದ ಹಿತದೃಷ್ಟಿಯಿಂದ ತಾಳ್ಮೆ ಅತ್ಯಗತ್ಯ” ಎಂದು ಸ್ಪಷ್ಟಪಡಿಸಿದರು.
ಬೋರ್ಡ್ ಹಾಗೂ ಕಾರ್ಪೊರೇಷನ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ರಾಜೀನಾಮೆ ನೀಡಲು ಸೂಚಿಸಿರುವುದಾಗಿ ತಿಳಿಸಿದ ಅವರು, “2.5 ವರ್ಷಗಳ ಅಧಿಕಾರಾವಧಿಯ ಬಗ್ಗೆ ಮೊದಲೇ ಸ್ಪಷ್ಟಪಡಿಸಲಾಗಿತ್ತು. ಸಚಿವರಿಗೂ ಈ ಕುರಿತು ಮುಂಚಿತವಾಗಿಯೇ ಮಾಹಿತಿ ನೀಡಲಾಗಿದೆ. ಮೊದಲು ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ, ನಂತರ ಶಾಸಕರ ಜೊತೆ ಮಾತುಕತೆ ನಡೆಸಲಾಗುವುದು” ಎಂದರು.


