
ಬೆಂಗಳೂರು: ವಾಟ್ಸಪ್ಗೆ ಬಂದ ಅಪರಿಚಿತ ಮದುವೆ ಆಹ್ವಾನ ಪತ್ರಿಕೆಯನ್ನು ತೆರೆದು ಸರ್ಕಾರಿ ಅಧಿಕಾರಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಬರೋಬ್ಬರಿ ₹9.96 ಲಕ್ಷ ಹಣ ಕಳೆದುಕೊಂಡಿದ್ದಾರೆ.
ಅರಣ್ಯ ಇಲಾಖೆ ಉದ್ಯೋಗಿ ರಮೇಶ್ ಬಾಬು ಎಂಬುವವರ ಮೊಬೈಲ್ಗೆ ಜುಲೈ 14ರಂದು ಅಪರಿಚಿತ ಸಂಖ್ಯೆಯಿಂದ ಮದುವೆ ಆಹ್ವಾನದ ಹೆಸರಿನಲ್ಲಿ ಮೆಸೇಜ್ ಬಂದಿತ್ತು. ಪರಿಚಿತರದ್ದು ಇರಬಹುದು ಎಂದು ಭಾವಿಸಿ ಅವರು ಫೈಲ್ ಓಪನ್ ಮಾಡಿದ್ದಾರೆ. ಅದು ವಂಚಕರು ಕಳುಹಿಸಿದ್ದ ‘APK’ ಫೈಲ್ ಆಗಿದ್ದು, ಅದನ್ನು ಡೌನ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ ಹಂತ-ಹಂತವಾಗಿ ಹಣ ಕಡಿತಗೊಂಡಿದೆ.
ಖಾತೆಯಿಂದ ಒಟ್ಟು ₹9.96 ಲಕ್ಷ ವರ್ಗಾವಣೆಯಾಗಿರುವುದನ್ನು ಕಂಡು ಆತಂಕಗೊಂಡ ಅವರು, ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ವಾಟ್ಸಪ್ನಲ್ಲಿ ಬರುವ ಅಪರಿಚಿತ ಲಿಂಕ್ ಹಾಗೂ APK ಫೈಲ್ಗಳನ್ನು ಯಾವುದೇ ಕಾರಣಕ್ಕೂ ಓಪನ್ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಸಿದ್ದಾರೆ.


