
ಮಂಗಳೂರು: ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರುವ ನೆಪದಲ್ಲಿ, ಅವರೊಂದಿಗೆ ಬಾಂಗ್ಲಾದೇಶದ ಪ್ರಜೆಗಳನ್ನೂ ಮಂಗಳೂರಿಗೆ ಕೆಲಸಕ್ಕಾಗಿ ಅಕ್ರಮವಾಗಿ ಕರೆತಂದ ಆರೋಪದಡಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ಪಶ್ಚಿಮ ಬಂಗಾಳ ಮೂಲದ ಮೊಯಿದಿನ್ ಇಸ್ಲಾಂ ಹಾಗೂ ದಿಲ್ವಾರ್ ಹುಸೇನ್ ಅವರನ್ನು ಮಂಗಳೂರು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಕೋಲ್ಕತ್ತಾದಲ್ಲಿ ಸಿಕ್ಕಿಬಿದ್ದ ಪ್ರಮುಖ ಆರೋಪಿ: ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ರಸುಲ್ ಇಸ್ಲಾಂ ತಲೆಮರೆಸಿಕೊಂಡಿದ್ದನು. ಆತನ ಪತ್ತೆಗಾಗಿ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರು ಕೋಲ್ಕತ್ತಾ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಜಂಟಿ ಕಾರ್ಯಾಚರಣೆಯ ಯಶಸ್ಸಿನ ಫಲವಾಗಿ ರಸುಲ್ನನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ.
“ಬಂಧಿತ ಆರೋಪಿ ರಸುಲ್ ಇಸ್ಲಾಂನನ್ನು ಮಂಗಳೂರಿಗೆ ಕರೆತರಲು ನಮ್ಮ ವಿಶೇಷ ಪೊಲೀಸ್ ತಂಡ ಈಗಾಗಲೇ ಕೋಲ್ಕತ್ತಾಕ್ಕೆ ತೆರಳಿದೆ. ಆತನನ್ನು ಇಲ್ಲಿಗೆ ಕರೆತಂದು ವಿಚಾರಣೆ ನಡೆಸಿದ ಬಳಿಕ, ಈ ಜಾಲದ ಹಿಂದೆ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಸಂಪೂರ್ಣ ಮಾಹಿತಿ ಹೊರಬರಲಿದೆ.” ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ವರದಿಯಲ್ಲಿ ತಿಳಿಸಿರುತ್ತಾರೆ.


