ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರ ನಾಗನೂರ ಗ್ರಾಮದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯೇ ಪತಿಯನ್ನು ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.
ಬಾಗಲಕೋಟೆಯ ಶ್ರೀಕುಮಾರೇಶ್ವರ ನಗರದ ನಿವಾಸಿಯಾಗಿದ್ದ ವಿಶ್ವನಾಥ ಹಾದಿಮನಿ (28) ಕೊಲೆಯಾದ ದುರ್ದೈವಿಯಾಗಿದ್ದು, ಈತನನ್ನು ಕೊಲೆ ಮಾಡಿದ ಆರೋಪದ ಮೇಲೆ ಪತ್ನಿ ಕವಿತಾ ಹಾದಿಮನಿ (26) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ದೂರದ ಸಂಬಂಧಿಯಾಗಿದ್ದ ಕವಿತಾಳನ್ನು ವಿಶ್ವನಾಥ್ 2022ರ ಫೆಬ್ರವರಿ 7ರಂದು ಪ್ರೀತಿಸಿ, ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿ ನಡುವೆ ವೈಮನಸ್ಸು ಉಂಟಾಗಿದ್ದರಿಂದ ಕವಿತಾ ಮೂರು ವರ್ಷಗಳ ಹಿಂದೆಯೇ ತನ್ನ ತವರು ಮನೆಗೆ ಹೋಗಿ ನೆಲೆಸಿದ್ದಳು. ಇತ್ತೀಚೆಗೆ ವಿಶ್ವನಾಥನ ಸಹೋದರಿಯ ಮದುವೆ ನಿಶ್ಚಯವಾಗಿದ್ದರಿಂದ, ಹೆತ್ತವರ ಒತ್ತಾಯದ ಮೇರೆಗೆ ಕವಿತಾ ರಡ್ಡೆರ ನಾಗನೂರ ಗ್ರಾಮಕ್ಕೆ ಬಂದಿದ್ದಳು. ಆದರೆ ನಾದಿನಿಯ ಮದುವೆ ಮುಗಿಯುತ್ತಿದ್ದಂತೆ ಆಕೆ ಮತ್ತೆ ತನ್ನ ತವರು ಮನೆಗೆ ವಾಪಸಾಗಿದ್ದಳು. ಇದೇ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಭೀಕರ ಕೊಲೆ ನಡೆದಿದೆ ಎಂದು ವರದಿಯಾಗಿದೆ.


