ಪುತ್ತೂರು ಜಾತ್ರೆ ವೇಳೆ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಪುತ್ತೂರು ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುತ್ತೂರು ನರಿಮೊಗರು ನಿವಾಸಿ ಹರ್ಷ ಗೋಪಾಲ್ (29) ಹಾಗೂ ಪುತ್ತೂರು ಕಬಕ ನಿವಾಸಿ ಹರೀಶ್ (42) ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ವಿವರ; ದಿನಾಂಕ: 20-04-2026 ರಂದು ರಾತ್ರಿ ವೇಳೆ, ಪುತ್ತೂರು ಪೇಟೆಯಲ್ಲಿರುವ ದೇವಸ್ಥಾನದ ಜಾತ್ರೆ ನಡೆಯುತ್ತಿದ್ದ ಸ್ಥಳದಲ್ಲಿ ಪುತ್ತೂರು ನಗರ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ವೇಳೆ ದೇವಸ್ಥಾನದ ಕಛೇರಿಯ ಬಳಿ ಜನ ಸೇರಿದ್ದು ಅದನ್ನು ಪರಿಶೀಲಿಸಲು ತೆರಳಿದ್ದಾರೆ. ಆಗ ಅಲ್ಲಿ ಇಬ್ಬರು ಗಲಾಟೆ ನಡೆಸುತ್ತಾ ಸಾರ್ವಜನಿಕ ಶಾಂತಿ ಭಂಗವನ್ನುಂಟು ಮಾಡುತ್ತಿರುವುದು ಕಂಡುಬಂದಿದೆ. ಗಲಾಟೆ ನಡೆಸದಂತೆ ತಿಳುವಳಿಕೆ ನೀಡಿದರೂ ಅವರು ಗಲಾಟೆ ಮುಂದುವರಿಸಿದ್ದಾರೆ. ಹಾಗಾಗಿ ಮುಂದಿನ ಕಾನೂನು ಕ್ರಮಕ್ಕಾಗಿ ಅವರುಗಳನ್ನು ವಶಕ್ಕೆ ಪಡೆದು ವಿಚಾರಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 48/2026, ಕಲಂ: 194 (2) ಬಿಎನ್ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


