ಬೆಂಗಳೂರು: ವಾಣಿಜ್ಯ ಬಳಕೆಯ ಸಿಲಿಂಡರ್ ವಿಚಾರದಲ್ಲಿ ಹೋಟೆಲ್ ನವರು ಒಂದು ವಾರ ಕಾಲ ಸಹಿಸಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಇಂದು ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯರಾದ ನಾಗರಾಜ್ ಯಾದವ್ ಮತ್ತು ಐವಾನ್ ಡಿಸೋಜಾ ಗ್ಯಾಸ್ ಸಿಲಿಂಡರ್ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ವೇಳೆ ಉತ್ತರಿಸಿದ ಸಚಿವರು, ಕಮರ್ಷಿಯಲ್ ಗ್ಯಾಸ್ ಗೆ ಒಂದು ವಾರ ಅಥವಾ 10 ದಿನ ಸಮಸ್ಯೆ ಆಗುತ್ತದೆ. ಸ್ಟಾಕ್ ಇಲ್ಲದಿರುವ ಸಹಿಸಿಕೊಳ್ಳಬೇಕು, ಆಟೋಗಳಿಗೆ ಗ್ಯಾಸ್ ಅವಕಾಶ ಮಾಡಿಕೊಡಲು ಸೂಚನೆ ಕೊಡಲಾಗಿದೆ ಎಂದು ಹೇಳಿದ್ದಾರೆ.
ಇಂದು ಕೂಡಾ ತೈಲ ಕಂಪನಿಗಳ ಜೊತೆ ಮಾತುಕತೆ ಮಾಡಿದ್ದು, ಆಸ್ಪತ್ರೆ, ಹಾಸ್ಟೆಲ್ ಗಳಿಗೆ ಕಮರ್ಷಿಯಲ್ ಗ್ಯಾಸ್ ಕೊಡುತ್ತೇವೆ, ಒಂದು ವಾರದಲ್ಲಿ ಸಮಸ್ಯೆ ಪರಿಹಾರ ಆಗಲಿದೆ, ಹೋಟೆಲ್ ನವರಿಗೆ ಎಲೆಕ್ಟ್ರಿಕ್ ಸ್ಟೌವ್ ಬಳಕೆ ಮಾಡಿ ಅಂತ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಕಾಳ ಸಂತೆ ಮಾರಾಟದ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆಗೆ ಸೂಚನೆ ಕೊಡಲಾಗಿದೆ ಎಂದೂ ಸಚಿವ ಕೆ.ಹೆಚ್. ಮುನಿಯಪ್ಪ ಸದನದಲ್ಲಿ ಮಾಹಿತಿ ನೀಡಿದ್ದಾರೆ


