ಕಡಬ: ಅಡಿಕೆ ಕದಿಯುವಾಗ ಕಳ್ಳನೊಬ್ಬ ಸಿಕ್ಕಿ ಬಿದ್ದ ಘಟನೆ ಕುಟ್ರುಪ್ಪಾಡಿ ಗ್ರಾಮದ ವಾಲ್ಯ ಎಂಬಲ್ಲಿ ನಡೆದಿದೆ. ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ನಿವಾಸಿ ಪುನೀತ್ ಸಿಕ್ಕಿ ಬಿದ್ದ ಕಳ್ಳ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಕುಟ್ರುಪ್ಪಾಡಿ ಗ್ರಾಮದ ನಿವಾಸಿ ದಿನಕರ ಶಣೈ ಎಂಬವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಫೆಬ್ರವರಿ 28ರಂದು ಬೆಳಿಗ್ಗೆ 9:30ರ ಸುಮಾರಿಗೆ ತಮ್ಮ ತೋಟದಲ್ಲಿ ತೋಟದ ಕೆಲಸಗಾರ ಲಿಂಗಪ್ಪ ಎಂಬವರು ಕೆಲಸ ಮಾಡುತ್ತಿದ್ದಾಗ, ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ನಿವಾಸಿ ಪುನೀತ್ ಎಂಬವರು ಸುಮಾರು 25 ಕೆ.ಜಿ ಅಡಿಕೆಯನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಕೆಲಸಗಾರ ಲಿಂಗಪ್ಪ ಅವರು ಆರೋಪಿಯನ್ನು ಪ್ರಶ್ನಿಸಿದಾಗ, ಪುನೀತ್ ಅಡಿಕೆ ತುಂಬಿದ್ದ ಚೀಲವನ್ನು ಸ್ಥಳದಲ್ಲೇ ಬಿಟ್ಟು ಅಲ್ಲಿಂದ ಓಡಿ ಹೋಗಿದ್ದಾನೆ ಎಂದು ವರದಿಯಾಗಿದೆ. ಕಳ್ಳತನ ಮಾಡಲು ಯತ್ನಿಸಿದ ಅಡಿಕೆಯ ಒಟ್ಟು ಮೌಲ್ಯ ಸುಮಾರು 7,000 ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ದಿನಕರ ಶಣೈ ಅವರ ದೂರಿನ ಆಧಾರದ ಮೇಲೆ ಕಡಬ ಪೊಲೀಸರು ಅ.ಕ್ರ 25/2026 ರಂತೆ, ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 303(2) ಮತ್ತು 62 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಸದ್ಯ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.


